Sunday, October 21, 2018

ಅಮೃತಬಳ್ಳಿ


ಅಮೃತಬಳ್ಳಿ
ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶಿಷ್ಟವಾಗಿ ಪರ್ಣಪಾತಿ ಹಾಗೂ ಒಣ ಕಾಡುಗಳಲ್ಲಿ ಬೆಳೆಯುತ್ತದೆ. ಎಲೆಗಳು ಹೃದಯಾಕಾರವನ್ನು ಹೊಂದಿರುತ್ತವೆ.
ಇದು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿ. ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿವೆ. ಇದರ ಕಾಂಡದ ಒಂದು ತುಂಡನ್ನು ಮಣ್ಣಿನಲ್ಲಿ ನೆಟ್ಟರೆ ಬಳ್ಳಿಯ ರೂಪದಲ್ಲಿ ಹಬ್ಬುತ್ತದೆ. ಇದು ಬಾಡಿ ಒಣಗುವುದಿಲ್ಲ; ಸುಲಭದಲ್ಲಿ ಸಾಯುವುದಿಲ್ಲ. ಆದ್ದರಿಂದಲೇ ಇದಕ್ಕೆ ’ಅ- ಮೃತ’ ಎಂಬ ಹೆಸರು. ಬಳ್ಳಿಯನ್ನು ಮನೆಯ ಎದುರು ಚಪ್ಪರದಂತೆ ಹಬ್ಬಿಸಬಹುದು.ಇದರ ತೊಗಟೆಯ ಬಣ್ಣ ಬೂದಿಮಿಶ್ರಿತ ಕಂದು ಬಣ್ಣ. ಹೂಗಳ ಬಣ್ಣ ಹಸಿರು ಮಿಶ್ರಿತ ಹಳದಿ. ಕಾಯಿಯು ಮಾಗಿದಾಗ ಗಾಢ ಕೆಂಪು ಬಣ್ಣದ ದುಂಡಗಿನ ಹಣ್ಣಾಗುತ್ತದೆ. ಅಮೃತಬಳ್ಳಿಯು ಮರಗಳ ಮೇಲೆ ತೋಟಗಳ ಬೇಲಿಗಳ ಮೇಲೆ ಹಬ್ಬಿರುತ್ತದೆ ಹಾಗೂ ಕಾಡುಗಳಲ್ಲಿ ಪೊದೆಗಳ ಮೇಲೂ ಸಹ ಹಬ್ಬಿರುತ್ತದೆ. ಇದರ ಪತ್ರೆ ಹಸಿರು ಮತ್ತು ಹೃದಯಾಕಾರವಾಗಿರುತ್ತದೆ, ಮೃದುವಾಗಿರುತ್ತದೆ. ಕಾಂಡದ ಮೇಲೆ ತೆಳು ಪೊರೆಯಿರುತ್ತದೆ ಮತ್ತು ದಾರಗಳಂತೆ ಕಾಂಡದ ಭಾಗಗಳು ಇಳಿಬಿದ್ದಿರುತ್ತದೆ. ಪ್ರತಿಭಾಗವೂ ಕಹಿಯಾಗಿರುತ್ತದೆ. ಬೇವಿನಮರದ ಮೇಲೆ ಹಬ್ಬಿರುವ ಬಳ್ಳಿಯು ಅತೀ ಶ್ರೇಷ್ಟವಾದುದು. ಹೂಗಳು ಹಸಿರು ಬಣ್ಣದವು. ಹೂ ಬಿಡುವ ಕಾಲ ಫೆಬ್ರವರಿ. ದೊಡ್ಡ ದೊಡ್ಡ ಬಂಗಲೆಗಳ ಮುಂದೆ, ಪ್ರವಾಸಿ ಮಂದಿರಗಳ ಮುಂದೆ ಚಪ್ಪರ ಹಾಕಿ ಬಳ್ಳಿಯನ್ನು ನೆಡುತ್ತಾರೆ ಮತ್ತು ಥಂಡಿಸಡಕ್ ಅಥವಾ ಶೀತದ್ವಾರ ನಿರ್ಮಿಸುತ್ತಾರೆ. ಈ ಬಳ್ಳಿಯ ಮೇಲೆ ಬೀಸಿ ಬರುವ ಗಾಳಿ ಅಮೃತ ಸಮಾನವಾದುದು ಮತ್ತು ಈ ಬಳ್ಳಿಯಡಿಯಲ್ಲಿ ನಿಲ್ಲುವ ಅಥವಾ ಸಾಗುವ ಮನುಷ್ಯ, ಎತ್ತಿನಗಾಡಿ, ಪಶು-ಪಕ್ಷಿಗಳು ಮತ್ತು ಈಗಿನ ಆಧುನಿಕ ವಾಹನಗಳು ಅಪಘಾತಗಳಿಂದ ಸುರಕ್ಷಿತವಾಗಿರುವವು ಎನ್ನುವ ನಂಬಿಕೆಯಿದೆ.
ಇದು ತ್ರಿದೋಷಗಳಿಂದ (ಅಂದರೆ ವಾತ, ಪಿತ್ತ, ಕಫ) ಉಂಟಾದ ತೊಂದರೆಗಳನ್ನು ನಿವಾರಿಸುತ್ತದೆ. ಎಲ್ಲ ಬಗೆಯ ಜ್ವರಗಳಿಗೂ ಅಮೃತ ಬಳ್ಳಿ ಪರಿಣಾಮಕಾರಿ ಔಷಧಿ. ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿಯಂತೆ (ಆಹಾರ ಸೇವನೆಗೆ ಮುಂಚೆ) ಸೇವಿಸಬೇಕು. ಅಮೃತ ಬಳ್ಳಿಯ ಕಾಂಡವನ್ನು ಇತರ ಔಷಧೀಯ ಸಸ್ಯಗಳೊಂದಿಗೆ ಬೆರೆಸಿ ಕಷಾಯ ಮಾಡಿ ಕುಡಿಯಬಹುದು. (ಸಂಬಾರ ಬಳ್ಳಿ, ಅಮೃತ ಬಳ್ಳಿ ಎಲೆ, ಮಜ್ಜಿಗೆ ಸೊಪ್ಪು, ತುಳಸಿ,ಲವಂಗತುಳಸಿ, ಅರಸಿನ ಪುಡಿ ,ಕಾಳುಮೆಣಸು,ಜೀರಿಗೆ,ಶುಂಠಿ). ಇದರ ಐದಾರು ಎಲೆಗಳನ್ನು ಪ್ರತಿನಿತ್ಯ ಸೇವಿಸಬಹುದು. ಎಲೆಯು ಸ್ವಲ್ಪ ಕಹಿ ಮತ್ತು ಒಗರಿನಿಂದ ಕೂಡಿದೆ. ಎಲೆ ಮತ್ತು ಕಾಂಡದಿಂದ ತಂಬುಳಿ ತಯಾರಿಸಬಹುದು. ಎಲೆ ಮತ್ತು ಕಾಂಡವನ್ನು ಜೀರಿಗೆಯೊಂದಿಗೆ ನುಣ್ಣಗೆ ಅರಿಯಬೇಕು. ಅದಕ್ಕೆ ಮಜ್ಜಿಗೆ ಸೇರಿಸಿ ಸಾಸಿವೆ ಒಗ್ಗರಣೆ ಕೊಟ್ಟರೆ ತಂಬುಳಿ ತಯಾರು. ಈ ಬಳ್ಳಿಯ ಮೇಲೆ ಬೀಸಿ ಬರುವ ಗಾಳಿಯು ಆರೋಗ್ಯಕ್ಕೆ ಹಿತಕಾರಿ ಮತ್ತು ಮನೆಗೆ ತಂಪು

ಕೃಪೆ : ಸಸ್ಯ ಕಣಜ 

ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಪುನರ್ಪುಳಿ

ಪುನರ್ಪುಳಿ
ಆಹಾರ ಶೈಲಿಯಲ್ಲಾದ ಬದಲಾವಣೆ, ಅನಿಯಮಿತ ಸಮಯದಲ್ಲಿ ಆಹಾರ ಸೇವನೆ ಹೀಗೆ ಹಲವಾರು ಕಾರಣದಿಂದ ದೇಹದಲ್ಲಿ ಪಿತ್ತ ಹೆಚ್ಚಾಗುವ ಮೂಲಕ ಆಹಾರ ಸೇವನೆಯಲ್ಲಿ ಅರುಚಿ, ವಾಕರಿಕೆ ಬರುವಂತಾಗುವುದು ಹೀಗೆ ಹಲವು ರೀತಿಯಲ್ಲಿ ದೇಹಕ್ಕೆ ತೊಂದರೆಯುಂಟಾಗುತ್ತದೆ. ಇಂತಹ ಸಮಯದಲ್ಲಿ ದೇಹದಲ್ಲಿನ ಅಧಿಕ ಪಿತ್ತವನ್ನು ಕಡಿಮೆ ಮಾಡಲು ‘ಪುನರ್ಪುಳಿ’ ಅತ್ಯಂತ ಸಹಕಾರಿ.
ಪಶ್ಚಿಮ ಘಟ್ಟದಲ್ಲಿ ಯಥೇಚ್ಚವಾಗಿ ಬೆಳೆಯುವ ಪುನರ್ಪುಳಿಗೆ ಸ್ಥಳೀಯವಾಗಿ ಮುರುಗಲು ಎಂಬ ಹೆಸರಿದ್ದು, ಯಾವುದೇ ಪೋಷಣೆಯ ಅಗತ್ಯವಿಲ್ಲದೆ ಬೆಳೆಯುವ ಇದು ಏಪ್ರಿಲ್-ಮೇ ಯಲ್ಲಿ ಹಣ್ಣು ಬಿಡುತ್ತದೆ.
ಉಪಯೋಗ ಹೇಗೆ..?
ಚೆನ್ನಾಗಿ ಹಣ್ಣಾದ ಬೀಜ ತೆಗೆದು ಹೊರಗಿನ ಸಿಪ್ಪೆಯನ್ನು ಒಣಗಿಸಿ ಇಟ್ಟರೆ ವರುಷವಿಡೀ ಸಾರು ಮತ್ತು ಶರಬತ್ತು ಮಾಡಬಹುದಾಗಿದೆ. ಅಲ್ಲದೇ ತಾಜಾ ಹಣ್ಣಿನ ತಿರುಳನ್ನು ಹಿಂಡಿ ಅದರ ರಸದಿಂದಲೂ ಶರಬತ್ತು ಮಾಡಬಹುದು. ಇದರ ಬೀಜದಿಂದ ಎಣ್ಣೆಯನ್ನು ತಯಾರಿಸಬಹುದಾಗಿದ್ದು ಇದು ಕಾಲು ಒಡೆತಕ್ಕೆ ಪರಿಣಾಮಕಾರಿ ಮದ್ದಾಗಿದೆ.
ಸ್ವಲ್ಪ ಕಾಳುಮೆಣಸು, ಬೆಲ್ಲ, ಉಪ್ಪು ಹಾಕಿ ಕುದಿಸಿ ಕರಿಬೇವು, ಜೀರಿಗೆ ಮತ್ತು ಸಾಸಿವೆಯನ್ನು ತುಪ್ಪದಲ್ಲಿ ಒಗ್ಗರಣೆ ಹಾಕಿ ತಯಾರಿಸಿದ ಸಾರು ಪಿತ್ತವನ್ನು ನಿವಾರಿಸುತ್ತದೆ. ಈ ಪುನರ್ಪುಳಿಯಲ್ಲಿ ಕೆಂಪು ಮತ್ತು ಬಿಳಿ ಎಂಬ ಎರಡು ಪ್ರಬೇಧಗಳಿದ್ದು, ಪಿತ್ತ ನಿವಾರಣೆಗೆ ಬಿಳಿಯದ್ದು ಅತ್ಯುತ್ತಮವಾಗಿದೆ. ಪುನರ್ಪುಳಿ ಸಿಪ್ಪೆಯನ್ನು ಅಡುಗೆಯಲ್ಲಿ ಬಳಸಿದರೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇದು ಹೃದಯದ ಸಮಸ್ಯೆಯಿಂದಲೂ ದೂರವಿರಿಸಲು ಸಹಕಾರಿಯಾಗುತ್ತದೆ.
ಇಷ್ಟು ಮಾತ್ರವಲ್ಲದೇ ಶೀತ, ಕೆಮ್ಮು ಗುಣಪಡಿಸಲು, ಹಸಿವು ಹೆಚ್ಚಿಸಲು, ಬೊಜ್ಜು ಕರಗಿಸಲು ಪುನರ್ಪುಳಿಯನ್ನು ಉಪಯೋಗಿಸುತ್ತಿದ್ದು ಸಿಪ್ಪೆ ಒಣಗಿಸಿಟ್ಟರೆ ಅದರಿಂದ ಶರಬತ್ತನ್ನು ಬೇಕೆಂದಾಗ ತಯಾರಿಸಬಹುದು.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಎಕ್ಕ


ಅರ್ಕ,' ಎಂದರೆ, ಪೂಜನೀಯವೆಂದರ್ಥ. 'ತೈತ್ತರೀಯ ಸಂಹಿತೆ,' ಯಲ್ಲಿ ಅರ್ಕ, ಉಷ್ಣ ಮತ್ತು ತೀಕ್ಶ್ಣ ಗುಣಗಳನ್ನು ಹೊಂದಿದೆಯೆಂದು ಹೇಳಲಾಗಿದೆ. 'ಅಥರ್ವ ಶೌನಕೇಯ ಸಂಹಿತೆ,' ಯಲ್ಲಿ 'ಅರ್ಕಮಣಿ' 'ವಾಜೀಕರಣ,' (ಸಂತಾನ ಸಾಮರ್ಥ್ಯ ಸಂವರ್ಧನೆ) ದಂತೆ ಕಾರ್ಯ ನಿರ್ವಹಿಸುತ್ತದಯೆಂದು ತಿಳಿಸಲಾಗಿದೆ.
ಎಕ್ಕದ ಯಾವುದೇ ಭಾಗವನ್ನಾಗಲಿ ಔಷಧರೂಪದಲ್ಲಿ ಸೇವನೆಗೆ ನೀಡಬೇಕಾದಲ್ಲಿ, ಆ ಭಾಗವನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಕೊಂಡು ೭ ಸಾರಿ ಹಸುವಿನ-ಹಾಲಿನಲ್ಲಿ ಭಾವನೆ ಕೊಟ್ಟು ಅನಂತರ ೭ ಬಾರಿ ಎಣ್ಣೆ-ಹಾಲಿನಲ್ಲಿ ಭಾವನೆಕೊಟ್ಟು ಉಪಯೋಗಿಸಬೇಕು.ಯಾವುದೇ ಬಗೆಯ ಜ್ವರವಿದ್ದರೆ, ಎಕ್ಕದ ಬೇರನ್ನು ನಿಂಬೇಹಣ್ಣಿನ-ರಸದಲ್ಲಿ ಅರೆದು ಸೇವಿಸಿದರೆ ಉಪಶಮನವಾಗುತ್ತದೆ.ಚೇಳುಕಡಿದಲ್ಲಿ ಎಕ್ಕದ ಬೇರನ್ನು ತಣ್ಣೀರಿನಲ್ಲಿ ಅರೆದು ಕುಡಿಯಬೇಕು.ಕಫದಿಂದ ಕೂಡಿದ ಕೆಮ್ಮಿದ್ದರೆ,ಎಕ್ಕದ ಬೇರಿನ ತೊಗಟೆಯನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಂಡು ೫ ಚಿಟಿಕೆಯಷ್ಟನ್ನು ಜೇನುತುಪ್ಪದೊಂದಿಗೆ ಸೇರಿಸಿ ದಿನಕ್ಕೆ ಎರಡುಬಾರಿ ಸೇವಿಸಬೇಕು.ಮುಖದ ಮೇಲೆ ಕಪ್ಪು ಚುಕ್ಕೆಗಳಿದ್ದರೆ, (ಬಂಗು) ಎಕ್ಕದ ಬೇರನ್ನು ನಿಂಬೆರಸದಲ್ಲಿ ತೇದು ಅದಕ್ಕೆ ಸ್ವಲ್ಪ ಪುನುಗು ಸೇರಿಸಿ ಲೇಪಿಸಿ ಮೃದುವಾಗಿ ಹಚ್ಚಿಕೊಳ್ಳಬೇಕು.ಅಂಗಾಲಿನಲ್ಲಿ ಮುಳ್ಳು ಸೇರಿಕೊಂಡಿದ್ದರೆ, ಮುಳ್ಳನ್ನು ನಿಧಾನವಾಗಿ ತೆಗೆದು ನಂತರ ಎಕ್ಕದ ಹಾಲನ್ನು ಆ ಜಾಗಕ್ಕೆ ಹಾಕುವುದರಿಂದ ಮುಳ್ಳಿನ ವಿಷದ ಬಾಧೆ ನಿವಾರಣೆಯಾಗುತ್ತದೆ.'ಮೂಲವ್ಯಾಧಿ,' ಯಿಂದ ಬಳಲುವವರಿಗೆ ಎಕ್ಕದ ಹಾಲಿಗೆ ಅರಿಶಿನ ಬೆರೆಸಿ ಮೊಳಕೆಗಳಿಗೆ ಲೇಪಿಸುವುದರಿಂದ ಬೇಗ ಗುಣವಾಗುತ್ತದೆ.ಎಕ್ಕದ ಕಾಂಡವನ್ನು ಹಲ್ಲುಜ್ಜಲು ಬಳಸಬಹುದು. 'ಹಲ್ಲುನೋವಿಗೆ,' ಇದು ಬಹಳ ಒಳ್ಳೆಯದು.'ಮೂತ್ರಕಟ್ಟಿದ್ದಲ್ಲಿ,' ಎಕ್ಕದ ಎಲೆಗಳನ್ನು ಒಣಗಿಸಿ ನಯವಾಗಿ ಪುಡಿಮಾಡಿಟ್ಟುಕೊಂಡು ೧೦ ಗ್ರಾಂ ನಷ್ಟನ್ನು ಬಿಸಿನೀರಿನಲ್ಲಿ ಬೆರಸಿ ಕುಡಿಸುವುದರಿಂದ 'ಮೂತ್ರವಿಸರ್ಜನೆ,' ಸುಗಮವಾಗುತ್ತದೆ.ಮೇಲಿಂದ-ಮೇಲೆ 'ಅಜೀರ್ಣ,' ದ ತೊಂದರೆ ಕಾಡುತ್ತಿದ್ದರೆ, ಎಕ್ಕದ ಬೇರಿನ ಭಸ್ಮವನ್ನು ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ,ಜೇನುತುಪ್ಪದೊಂದಿಗೆ ಸೇವಿಸತಕ್ಕದ್ದು.'ಗಾಯ,' ಗಳಿಗೆ ಮತ್ತು 'ವೃಣ,' ಗಳಿಗೆ ಒಣಗಿಸಿದ ಎಲೆಯನ್ನು ಪುಡಿಮಾಡಿಟ್ಟುಕೊಂಡು ಸಿಂಪಡಿಸಬೇಕು.ಮಹಿಳೆಯರಿಗೆ 'ಮುಟ್ಟಿನ ಪ್ರಕ್ರಿಯೆ ಅನಿಯಮಿತವಾಗಿದ್ದಲ್ಲಿ,'ಎಕ್ಕದ ಹೂವು, ಬೆಲ್ಲ ಸೇರಿಸಿ,ಅರೆದು ಗುಳಿಗೆಮಾಡಿಕೊಂಡು, ದಿನಕ್ಕೆ ೩-೪ ಮಾತ್ರೆಯಂತೆ ಸೇವಿಸುವುದು ಉತ್ತಮ.'ಬಿಳಿಸೆರಗಿನಿಂದ ಬಳಲುತ್ತಿರುವ ಮಹಿಳೆಯರು',ಎಕ್ಕದ ಹೂವನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಒಂದು ಚಿಟಿಕೆ ಪುಡಿಯನ್ನು ಜೇನುತುಪ್ಪಕ್ಕೆ ಸೇರಿಸಿ ೧೫ ದಿನಗಳ ವರೆಗೆ ಸೇವಿಸತಕ್ಕದ್ದು.ಅಜೀರ್ಣವಿದ್ದರೆ, ಎಕ್ಕದ ೧೦ ಹೂಗಳಿಗೆ ಒಂದು ಚಿಟಿಕೆ ಉಪ್ಪು ಬೆರೆಸಿ ತಿನ್ನಬೇಕು.ಕ್ರಿಮಿಕೀಟಗಳು, ಕಜ್ಜಿ,ಊತ, ಉರಿ ಬಾಧಿಸುತ್ತಿದ್ದರೆ, ಎಕ್ಕದ ಹಾಲನ್ನು ಅದರಮೇಲೆ ಲೇಪಿಸಿದರೆ, ಉಪಶಮನ ದೊರೆಯುತ್ತದೆ

ಕೃಪೆ : ಸಸ್ಯ ಕಣಜ 


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಅಶೋಕ ವೃಕ್ಷ


ಅಶೋಕ ವೃಕ್ಷ
೧) ಸ್ತ್ರೀಯರ ಮಾಸಿಕ ಅತಿಸ್ರಾವ ಹತೋಟಿಗೆ:
೨೦ ಗ್ರಾಂ ಅಶೋಕ ಮರದ ಚಕ್ಕೆಯನ್ನು ಚೆನ್ನಾಗಿ ಜಜ್ಜಿ ೨೫೦ ಮಿಲೀ ಹಾಲಿನಲ್ಲಿ ಹಾಕಿ ಕಷಾಯ ಮಾಡುವುದು. ತಣ್ಣಗಾದ ಮೇಲೆ ಕಷಾಯವನ್ನು ಶೋಧಿಸಿ ಕೆಂಪು ಕಲ್ಲುಸಕ್ಕರೆ ಪುಡಿ ಸೇರಿಸಿ ಹೊತ್ತಿಗೆ ನಾಲ್ಕು ಟೀ ಚಮಚ ಸೇವಿಸಬೇಕು.
೨) ಸಂತಾನ ಪ್ರಾಪ್ತಿಗೆ:
ಸ್ತ್ರೀಯರ ಋತುಚಕ್ರ ಸರಿಯಿದ್ದು ಅಶೋಕ ಮರದ ಎಲೆಗಳನ್ನು ಒಂದು ವಾರ ಸೇವಿಸಿದರೆ ಸಂತಾನ ಭಾಗ್ಯ ಲಭಿಸುವುದು.
೩) ಮುಟ್ಟಿನ ಶೂಲೆ ಮತ್ತು ಗರ್ಭಸ್ರಾವ ತಡೆಗೆ:
ಗ್ರಾಂ ಅತಿಮಧುರ,೨೦ ಗ್ರಾಂ ಅಶೋಕ ಮರದ ಚಕ್ಕೆಯನ್ನು ನುಣ್ಣಗೆ ಚೂರ್ಣ ಮಾಡಿ ಎರಡು ಲೋಟ ನೀರು ಹಾಕಿ ಕಾಯಿಸಿ ಕಾಲು ಭಾಗ ಉಳಿಯುವಂತೆ ಕಷಾಯ ಮಾಡುವುದು. ತಣ್ಣಗಾದ ಮೇಲೆ ಈ ಕಷಾಯಕ್ಕೆ ಸ್ವಲ್ಪ ಕಲ್ಲುಸಕ್ಕರೆ ಸೇರಿಸಿ ದಿವಸಕ್ಕೆ ೨ ಬಾರಿ ೨ ಟೀ ಚಮಚ ಸೇವಿಸುವುದರಿಂದ ಸಮಸ್ಯೆ ಹತೋಟಿಗೆ ಬರುತ್ತದೆ.
೪) ಬಿಳಿಸ್ರಾವಕ್ಕೆ:
-೧೦ ಗ್ರಾಂ ಅಶೋಕ ಚಕ್ಕೆಯನ್ನು ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರು ಸೇರಿಸಿ ಕಷಾಯ ಮಾಡಿ ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.
– ಅತಿಮಧುರ ಚೂರ್ಣ, ಬೂದುಗುಂಬಳದ ಬೇರಿನ ಚೂರ್ಣ,ಅಶ್ವಗಂಧಿ ಚೂರ್ಣ ಮತ್ತು ಉದ್ದಿನ ಹಿಟ್ಟು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರ ಮಾಡಿ, ೫ ಗ್ರಾಂ ಚೂರ್ಣವನ್ನು ಕಲ್ಲುಸಕ್ಕರೆ ಪುಡಿ ಸೇರಿಸಿದ ಹಾಲಿನಲ್ಲಿ ದಿವಸಕ್ಕೆ ಎರಡು ಬಾರಿ ತೆಗೆದುಕೊಂಡಲ್ಲಿ ಶ್ವೇತ ಪದರ ಹತೋಟಿಗೆ ಬರುತ್ತದೆ.
೫) ರಕ್ತ ಪಿತ್ತದ ನಿವಾರಣೆಗೆ:
ಅರ್ಧ ಟೀ ಚಮಚ ನುಣ್ಣಗಿರುವ ಜೀರಿಗೆ ಪುಡಿ ಮತ್ತು ಒಂದು ಟೀ ಚಮಚ ಅಶೋಕ ಚಕ್ಕೆಯ ಚೂರ್ಣಕ್ಕೆ ಸ್ವಲ್ಪ ಕಲ್ಲುಸಕ್ಕರೆ ಪುಡಿ ಸೇರಿಸಿ ನೀರಿನೊಂದಿಗೆ ಸೇವಿಸಿದರೆ ಪರಿಹಾರ ದೊರಕುವುದು.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಬನ್ನಿ ವೃಕ್ಷ ಅಥವಾ ಶಮಿ ವೃಕ್ಷ


ಬನ್ನಿ ವೃಕ್ಷ,ಅಥವಾ ಶಮಿ ವೃಕ್ಷ
ವೃಕ್ಷಗಳಲ್ಲಿ ಅತಿ ಶ್ರೇಷ್ಠವಾದವು ಅರಳಿ, ಔದುಂಬರ, ತೆಂಗು ಹಾಗೂ ಶಮೀವೃಕ್ಷ. ಶಮೀವೃಕ್ಷಕ್ಕೆ ಇನ್ನೊಂದು ಹೆಸರು ಬನ್ನಿಮರ.
ಈ ವೃಕ್ಷ ದೈವಸ್ವರೂಪಿ. ವಿಜಯದಶಮಿ ಬಂತೆಂದರೆ 'ಬನ್ನಿ' ಯನ್ನು ನೆನೆಯದವರಿಲ್ಲ. ಸಂಭ್ರಮದ ದಸರಾಕ್ಕೆ ತೆರೆ ಬೀಳುವುದು ಈ ಬನ್ನಿ ಮರದಿಂದಲೇ.
ಜಾರ್ವ ಎಂಬ ಮಹಾತಪಸ್ವಿ ಹಾಗೂ ಆತನ ಪತ್ನಿ ಸಮೇಧರಿಗೆ ಶಮೀಕಾ ಎಂಬ ಸುಂದರ ಮಗಳಿದ್ದಳು. ಮುದ್ದಾಗಿ ಬೆಳೆದ ಶಮೀಕಾಳಿಗೆ ಮದುವೆ ವಯಸ್ಸು ಬಂದಿತು. ನಂತರ ತಂದೆ-ತಾಯಿ ಧೌಮ್ಯ ಋಷಿಯ ಪುತ್ರನಾದ ಮಂದಾರನಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿದರು. ಮಂದಾರ ಕೌಶಿಕ ಮಹರ್ಷಿಯ ಶಿಷ್ಯನಾಗಿದ್ದರು. ನವ ದಂಪತಿ ಒಮ್ಮೆ ವಾಯುವಿಹಾರದಲ್ಲಿದ್ದಾಗ ವನದಲ್ಲಿ ಸೊಂಡಿಲುಗಳಿಂದ ಕೂಡಿದ ಭೃಶುಂಡಿ ಎಂಬ ಮುನಿಯನ್ನು ನೋಡಿದರು. ಅವರನ್ನು ನೋಡಿದ ದಂಪತಿಗೆ ನಗು ಬಂದಿತು.
ಇದನ್ನು ಗಮನಿಸಿದ ಭೃಶುಂಡಿಮುನಿ ನನ್ನನ್ನು ನೋಡಿ ಏತಕ್ಕಾಗಿ ಅಪಹಾಸ್ಯದ ನಗೆ ಬೀರಿದಿರಿ ಎಂದನು. ಆದರೂ ಆ ದಂಪತಿಗಳು ನಗುತ್ತಲೇ ಇದ್ದರು. ಭೃಶುಂಡಿ ಮುನಿಗೆ ಕೋಪ ತಡೆಯಲಾರದೆ ನೀವಿಬ್ಬರೂ ಯಾವ ಪ್ರಾಣಿಗಳಿಗೂ ಪ್ರಯೋಜನಕ್ಕೆ ಬಾರದ ಮರಗಳಾಗಿ ಜನಿಸಿರಿ ಎಂದು ಶಾಪವಿತ್ತರು. ಇದನ್ನು ಕೇಳಿದ ದಂಪತಿಗಳು ಹೆದರಿ ಮುನಿಯ ಪಾದಕ್ಕೆ ಎರಗಿ ತಮ್ಮ ತಪ್ಪಿಗೆ ಕ್ಷಮೆ ಕೇಳಿದರು ಹಾಗೂ ಈ ಶಾಪ ವಿಮೋಚನೆ ಯಾವಾಗ ಆಗುವುದು ಎಂದು ಕೇಳಿದರು. ಗಣಪತಿಯು ಪ್ರಸನ್ನವಾದಾಗ ಶಾಪ ವಿಮೋಚನೆ ಆಗುವುದು ಎಂದು ಹೇಳಿದರು. ಮುನಿಯ ಶಾಪದಂತೆ ಶಮೀಕಳು ಶಮೀವೃಕ್ಷವಾಗಿ, ಮಂದಾರನು ಮಂದಾರ ವೃಕ್ಷವಾಗಿ ಜನಿಸಿದರು. ನವ ದಂಪತಿ ಮನೆಗೆ ಬಾರದೆ ಇದ್ದರಿಂದ ತಂದೆ ತಾಯಿಗಳು ಹುಡುಕಿಕೊಂಡು ಕಾಡಿನೊಳಗೆ ಹೋದರು. ಅಲ್ಲಿ ಅವರು ಎರಡು ವಿಚಿತ್ರವಾದ ಮರಗಳನ್ನು ಕಂಡರು. ಅಲ್ಲದೆ ಋಷಿಯನ್ನು ಕೇಳಲು ನಡೆದ ಸಂಗತಿಯನ್ನು ತಿಳಿಸಿದರು.
ಶಾಪಗ್ರಸ್ತರಾಗಿದ್ದ ತನ್ನ ಅಳಿಯ ಮತ್ತು ಮಗಳಿಗೆ ದುರ್ವಾಸ ಮುನಿ ಹೇಳಿಕೊಟ್ಟಿದ್ದ ಗಣೇಶನ ಮಂತ್ರವನ್ನು ಹೇಳತೊಡಗಿದನು. ಮರಗಳ ರೂಪದಲ್ಲಿದ್ದ ಅಳಿಯ ಹಾಗೂ ಮಗಳು ಶ್ರದ್ಧಾಭಕ್ತಿಯಿಂದ ಮಂತ್ರವನ್ನು ಜಪಿಸುತ್ತಿದ್ದಂತೆ ಗಣಪತಿ ದರ್ಶನ ಕೊಟ್ಟನು. ಅವನ ದರ್ಶನದಿಂದ ಶಾಪ ವಿಮೋಚನೆಯಾಯಿತು. ಗಣಪತಿಯ ಅನುಗ್ರಹದಿಂದ ಮರಗಳಾಗಿದ್ದ ದಂಪತಿಗಳು ಮತ್ತೆ ಮೊದಲಿನಂತೆ ಆದರು.
ಶಮೀವೃಕ್ಷದ ಉಪಯೋಗ
* ಅರ್ಧಗಂಟೆ ಅಥವಾ ಒಂದು ಗಂಟೆ ಈ ಶಮೀವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡಿದರೆ ದೀರ್ಘಕಾಲೀನ ರೋಗಗಳಿದ್ದರೆ ಗುಣವಾಗುವುದು.
* ಹೃದ್ರೋಗ ಇದ್ದರೆ ಈ ಮರದ ಗಾಳಿಯನ್ನು ಪ್ರತಿದಿನ ಸೇವಿಸಿದ್ದರೆ ತೊಂದರೆ ನಿವಾರಣೆ ಆಗುವುದು.
* ಶಮೀ ವೃಕ್ಷ ಇರುವ ಸ್ಥಳದಲ್ಲಿ ಬಾವಿ ತೋಡಿಸಿದರೆ ಸಹಿ ನೀರು ಸಿಗುತ್ತದೆ.
* ವಾಸ್ತುದೋಷ ಇರುವ ಮನೆಯಲ್ಲಿ ಶಮೀವೃಕ್ಷದ ಎಲೆಯನ್ನು ದೇವರ ಮನೆಯಲ್ಲಿಟ್ಟರೆ ದೋಷ ನಿವಾರಣೆ.
* ಸಂತಾನಭಾಗ್ಯ ಇಲ್ಲದವರು ಈ ಶಮೀವೃಕ್ಷವನ್ನು ಬೆಳಗಿನ ಸಮಯದಲ್ಲಿ ಪ್ರದಕ್ಷಿಣಿ ಹಾಕಿದರೆ ಸಂತಾನ ಭಾಗ್ಯ ದೊರೆಯುವುದು.
* ದೀರ್ಘವಾದ ಕೆಮ್ಮು ಇದ್ದರೆ ಈ ವೃಕ್ಷದ ಚಕ್ಕೆಯಿಂದ ಕಷಾಯ ಮಾಡಿ ಕುಡಿದರೆ ಗುಣಮುಖವಾಗುವುದು.
* ವಿವಾಹಕ್ಕೆ ತಡೆಯಾದರೆ 48 ದಿನ ಈ ವೃಕ್ಷವನ್ನು ಪ್ರದಕ್ಷಿಣೆ ಹಾಕಬೇಕು.
* ಮಾಟ-ಮಂತ್ರ ಪ್ರಯೋಗವಾಗಿದ್ದರೆ ಈ ಮರಕ್ಕೆ 21 ದಿನ ಪೂಜೆ ಮಾಡಿದರೆ ಪ್ರಯೋಗದಿಂದ ಹೊರಬರಬಹುದು.
* ಪಾಂಡವರು ವನವಾಸದಲ್ಲಿದ್ದಾಗ ಅವರ ಶಸ್ತ್ರಗಳನ್ನು ಈ ಮರದ ಕೆಳಗೆ ಇಟ್ಟಿದ್ದರು.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಔದಂಬರ ವೃಕ್ಷ


ಔದಂಬರ ವೃಕ್ಷ
ಹಸಿರು ಬಣ್ಣದ, ಒಂದಡಿಯಷ್ಟು ಉದ್ದದ, ದೊಡ್ದ ಎಲೆಗಳನ್ನು ಹೊಂದಿರುವ ಔಡಬಲ ವೃಕ್ಷವು ೧೦ ರಿಂದ ೩೦ ಅಡಿ ಎತ್ತರಕ್ಕೆ ಬೆಳೆಯಬಲ್ಲುದು. ಫಿಕಸ್ ರೇಸಿಮೊಸ(ಫಿಕಸ ಗ್ಲೊಮೆರಾಟ) ಎಂಬ ವೈಜ್ಞಾನಿಕ ಹೆಸರುಳ್ಳ ಈ ಗಿಡವು ಮೊರಾಸೇ ಸಸ್ಯವರ್ಗಕ್ಕೆ ಸೇರಿದೆ. ಔದುಂಬರ ಸಂಸ್ಕ್ರತ ಪದವಗಿದ್ದು ಹಿಂದಿಯಲ್ಲಿ ಅಂಜೂರ್ ಎಂದೂ ಕನ್ನಡದಲ್ಲಿ ಅಂಜೂರ್/ ಅತ್ತಿ ಎಂದೂ ಕರೆಯುತ್ತಾರೆ. ಫಿಗ್ ಟ್ರೀ ಎನ್ನುವುದು ಆಂಗ್ಲ ಹೆಸರು. ಆಸ್ಟ್ರೇಲಿಯ, ಮಲೇಷ್ಯಾ, ಆಗ್ನೇಯ ಏಷ್ಯಾ ಮತ್ತು ಭಾರತೀಯ ಉಪಖಂಡದಲ್ಲಿ ಕಂಡುಬರುವ ಈ ಗಿಡವು ಒಣ-ಉಷ್ಣ ಹವೆಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಳೆಗಾಲದ ಆರಂಭ ಗಿಡ ನೆಡಲು ಸೂಕ್ತ ಕಾಲ. ಸಸಿ ಬಲಿಯುವ ತನಕ ಹೆಚ್ಚಿನ ನೀರು ಅಗತ್ಯ. ಒಂದು ವರ್ಷದಲ್ಲಿ ಕಾಯಿ ಬಿಡಲು ಶುರು ಮಾಡುವ ಈ ಮರಗಳು ೩೫ ವರ್ಷಗಳ ಕಾಲಾಬಾಳಿಕೆ ಹೊಂದಿರುತ್ತವೆ. ಹಣ್ಣುಗಳಲ್ಲಿ ನಾಲ್ಕು ವಿಧಗಳಿದ್ದು, ಕೊಯ್ಲಿನ್ ಸೀಸನ್ ಆಯಾ ಪ್ರದೇಶಕ್ಕೆ ತಕ್ಕಂತೆ ಬದಲಾಗುತ್ತದೆ. ಹೆಚ್ಚು ಮಾಗಿದ ಹಣ್ಣುಗಳು ಬಿರಿಯುವುದು ಉಂಟು. ಹೂವುಗಳು ಅತಿ ಚಿಕ್ಕದಾಗಿದ್ದು ಕಾಣಸಿಗುವುದು ಅಪರೂಪ. ಕಾಂಡಕ್ಕೆ ಅಂಟಿಕೊಂಡು ಗೊಂಚಲು ಕಾಯಿಗಳನ್ನು ಬಿಡುವುದು ಇದರ ವೈಶಿಷ್ಟ್ಯ. ಜೆಲ್ಲಿಯಂತಹ ಮಾಂಸಲ ತಿರುಳುಳ್ಳ ಸಿಹಿ ಸಹಿತ ಸ್ವಾದಿಷ್ಟ ಅಂಜೂರ ಹಣ್ಣುಗಳು ಕೇಂದ್ರ ಭಾಗದಲ್ಲಿ ಬೀಜ ಪುಂಜಗಳಿದ್ದು, ಅವುಗಳನ್ನು ಸಾಮಾನ್ಯವಾಗಿ ಕಣಜೀರಿಗೆ ಹುಳಗಳ ಭಾದಿಸುತ್ತವೆ. ಆದ್ದರಿಂದ ಹಣ್ಣುಗಳನ್ನು ೨-೩ ಹೋಳುಗಳಾಗಿಸಿ ಕಡು ಬಿಸಲಲ್ಲಿ ಸುಮಾರು ಒಂದು ಗಂಟೆ ಒಣಗಿಸಿ ಬಳಿಕ ತಿನ್ನುವುದು ಒಳ್ಳಯದು. ಪ್ರತಿಶತ ೯೦ ರಷ್ಟು ಔದುಂಬರದ ಹಣ್ಣುಗಳನ್ನು ಒಣಗಿಸಿಯೇ ಡ್ರ್ಯೆಫ್ರುಟ್ ಅಗಿ ಉಪಯೋಗಿಸುತ್ತಾರೆ. ಇದು ದತ್ತಾತ್ರೇಯರ ಪ್ರಿಯವಾದ ವೃಕ್ಷವಾಗಿದೆ .
ಗುಣ ವಿಶೇಷಗಳು :-
ಉಷ್ಣ ಗುಣ ಹೊಂದಿರುವ ಅತ್ತಿ ಹಣ್ಣು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಜೇನುತುಪ್ಪದೊಡನೆ ಸೇವಿಸಿದರೆ ಮೂತ್ರದಲ್ಲಿ ಅಥವಾ ಮಲದಲ್ಲಿ ರಕ್ತ ಹೋಗುವುದನ್ನು ಗುಣಪಡಿಸುತ್ತದೆ.ಹಣ್ಣನ್ನು ತಿನ್ನುವುದರಿಂದ ಕಫದ ಬಾಧೆ, ರಕ್ತನಾಳದ ದೋಷ ಉಪಶಮನವಾಗುತ್ತದೆ.ಅತ್ತಿಮರದ ಹಾಲಿಗೆ ಭೇದಿ(ಅತಿಸಾರ) ನಿಲ್ಲಿಸುವ ಶಕ್ತಿಯಿದೆ.ಮರದ ಚಕ್ಕೆಯ ಕಷಾಯ ಗರ್ಭ ರಕ್ಷಣೆಯ ಗುಣವುಳ್ಳದ್ದಾಗಿದ್ದು, ಮಧುಮೇಹ ರೋಗಿಗಳಿಗೂ ಸೂಕ್ತವಾದದ್ದು 

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಗರಿಕೆ ಹುಲ್ಲು


ಗರಿಕೆ ಹುಲ್ಲು
ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಹಾಗೆಂದು ಹಸಿ ಹುಲ್ಲನ್ನೇ ತಿನ್ನಬೇಕಾಗಿಲ್ಲ. ಏನು ಮಾಡಬಹುದು ನೋಡೋಣ.
* ಒಂದು ಹಿಡಿ ಗರಿಕೆಯನ್ನು ಎರಡು ಲೋಟ ನೀರಿನಲ್ಲಿ ಹಾಕಿ, ಆ ನೀರು ಸ್ವಲ್ಪ ಬತ್ತುವವರೆಗೆ ಕುದಿಸಿ ನಂತರ ಆ ನೀರನ್ನು ಕುಡಿದರೆ ಹಳೆಯ ಔಷಧಿಗಳ ಅವಶೇಷಗಳೆಲ್ಲ ಶರೀರದಿಂದ ಮಾಯವಾಗುತ್ತದೆ. ಒಂದು ತಿಂಗಳವರೆಗೆ ಈ ಕಷಾಯವನ್ನು ಕುಡಿಯಬೇಕಾಗುತ್ತದೆ.
*ಗರಿಕೆ ಮತ್ತು ಸ್ವಲ್ಪ ಜೀರಿಗೆಯನ್ನು ನೀರಿನಲ್ಲಿ ಕುದಿಸಿ ಆ ಕಷಾಯವನ್ನು ಕುಡಿದರೆ ವಾಯುವಿನಿಂದಾಗುವ ಬೆನ್ನು ಮತ್ತು ಸೊಂಟನೋವು ಕಡಿಮೆಯಾಗುತ್ತದೆ . ಈ ಕಷಾಯವನ್ನು ಸುಮಾರು ಒಂದು ತಿಂಗಳ ಕಾಲ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅಜೀರ್ಣದ ಸಮಸ್ಯೆಗಳು , ಹಸಿವಿಲ್ಲದಿರುವುದು ಎಲ್ಲದಕ್ಕೂ ಒಳ್ಳೆಯದು. ಅನಗತ್ಯ ಕೊಲೆಸ್ಟರಾಲ್ ಕೂಡಾ ಕಡಿಮೆಯಾಗುತ್ತದೆ .
*ತೆಂಗಿನ ಎಣ್ಣೆಯಲ್ಲಿ ಗರಿಕೆಯನ್ನು ಕುದಿಸಿ ಆರಿಸಿ ತಲೆಗೆ ಹಚ್ಚಿದರೆ, ಶರೀರದ ಉಷ್ಣದಿಂದಾಗುವ ತಲೆಹೊಟ್ಟು ಕಡಿಮೆಯಾಗುವುದು.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಅಮೃತಬಳ್ಳಿ

ಅಮೃತಬಳ್ಳಿ ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶ...