Sunday, October 21, 2018

ಅಮೃತಬಳ್ಳಿ


ಅಮೃತಬಳ್ಳಿ
ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶಿಷ್ಟವಾಗಿ ಪರ್ಣಪಾತಿ ಹಾಗೂ ಒಣ ಕಾಡುಗಳಲ್ಲಿ ಬೆಳೆಯುತ್ತದೆ. ಎಲೆಗಳು ಹೃದಯಾಕಾರವನ್ನು ಹೊಂದಿರುತ್ತವೆ.
ಇದು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿ. ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿವೆ. ಇದರ ಕಾಂಡದ ಒಂದು ತುಂಡನ್ನು ಮಣ್ಣಿನಲ್ಲಿ ನೆಟ್ಟರೆ ಬಳ್ಳಿಯ ರೂಪದಲ್ಲಿ ಹಬ್ಬುತ್ತದೆ. ಇದು ಬಾಡಿ ಒಣಗುವುದಿಲ್ಲ; ಸುಲಭದಲ್ಲಿ ಸಾಯುವುದಿಲ್ಲ. ಆದ್ದರಿಂದಲೇ ಇದಕ್ಕೆ ’ಅ- ಮೃತ’ ಎಂಬ ಹೆಸರು. ಬಳ್ಳಿಯನ್ನು ಮನೆಯ ಎದುರು ಚಪ್ಪರದಂತೆ ಹಬ್ಬಿಸಬಹುದು.ಇದರ ತೊಗಟೆಯ ಬಣ್ಣ ಬೂದಿಮಿಶ್ರಿತ ಕಂದು ಬಣ್ಣ. ಹೂಗಳ ಬಣ್ಣ ಹಸಿರು ಮಿಶ್ರಿತ ಹಳದಿ. ಕಾಯಿಯು ಮಾಗಿದಾಗ ಗಾಢ ಕೆಂಪು ಬಣ್ಣದ ದುಂಡಗಿನ ಹಣ್ಣಾಗುತ್ತದೆ. ಅಮೃತಬಳ್ಳಿಯು ಮರಗಳ ಮೇಲೆ ತೋಟಗಳ ಬೇಲಿಗಳ ಮೇಲೆ ಹಬ್ಬಿರುತ್ತದೆ ಹಾಗೂ ಕಾಡುಗಳಲ್ಲಿ ಪೊದೆಗಳ ಮೇಲೂ ಸಹ ಹಬ್ಬಿರುತ್ತದೆ. ಇದರ ಪತ್ರೆ ಹಸಿರು ಮತ್ತು ಹೃದಯಾಕಾರವಾಗಿರುತ್ತದೆ, ಮೃದುವಾಗಿರುತ್ತದೆ. ಕಾಂಡದ ಮೇಲೆ ತೆಳು ಪೊರೆಯಿರುತ್ತದೆ ಮತ್ತು ದಾರಗಳಂತೆ ಕಾಂಡದ ಭಾಗಗಳು ಇಳಿಬಿದ್ದಿರುತ್ತದೆ. ಪ್ರತಿಭಾಗವೂ ಕಹಿಯಾಗಿರುತ್ತದೆ. ಬೇವಿನಮರದ ಮೇಲೆ ಹಬ್ಬಿರುವ ಬಳ್ಳಿಯು ಅತೀ ಶ್ರೇಷ್ಟವಾದುದು. ಹೂಗಳು ಹಸಿರು ಬಣ್ಣದವು. ಹೂ ಬಿಡುವ ಕಾಲ ಫೆಬ್ರವರಿ. ದೊಡ್ಡ ದೊಡ್ಡ ಬಂಗಲೆಗಳ ಮುಂದೆ, ಪ್ರವಾಸಿ ಮಂದಿರಗಳ ಮುಂದೆ ಚಪ್ಪರ ಹಾಕಿ ಬಳ್ಳಿಯನ್ನು ನೆಡುತ್ತಾರೆ ಮತ್ತು ಥಂಡಿಸಡಕ್ ಅಥವಾ ಶೀತದ್ವಾರ ನಿರ್ಮಿಸುತ್ತಾರೆ. ಈ ಬಳ್ಳಿಯ ಮೇಲೆ ಬೀಸಿ ಬರುವ ಗಾಳಿ ಅಮೃತ ಸಮಾನವಾದುದು ಮತ್ತು ಈ ಬಳ್ಳಿಯಡಿಯಲ್ಲಿ ನಿಲ್ಲುವ ಅಥವಾ ಸಾಗುವ ಮನುಷ್ಯ, ಎತ್ತಿನಗಾಡಿ, ಪಶು-ಪಕ್ಷಿಗಳು ಮತ್ತು ಈಗಿನ ಆಧುನಿಕ ವಾಹನಗಳು ಅಪಘಾತಗಳಿಂದ ಸುರಕ್ಷಿತವಾಗಿರುವವು ಎನ್ನುವ ನಂಬಿಕೆಯಿದೆ.
ಇದು ತ್ರಿದೋಷಗಳಿಂದ (ಅಂದರೆ ವಾತ, ಪಿತ್ತ, ಕಫ) ಉಂಟಾದ ತೊಂದರೆಗಳನ್ನು ನಿವಾರಿಸುತ್ತದೆ. ಎಲ್ಲ ಬಗೆಯ ಜ್ವರಗಳಿಗೂ ಅಮೃತ ಬಳ್ಳಿ ಪರಿಣಾಮಕಾರಿ ಔಷಧಿ. ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿಯಂತೆ (ಆಹಾರ ಸೇವನೆಗೆ ಮುಂಚೆ) ಸೇವಿಸಬೇಕು. ಅಮೃತ ಬಳ್ಳಿಯ ಕಾಂಡವನ್ನು ಇತರ ಔಷಧೀಯ ಸಸ್ಯಗಳೊಂದಿಗೆ ಬೆರೆಸಿ ಕಷಾಯ ಮಾಡಿ ಕುಡಿಯಬಹುದು. (ಸಂಬಾರ ಬಳ್ಳಿ, ಅಮೃತ ಬಳ್ಳಿ ಎಲೆ, ಮಜ್ಜಿಗೆ ಸೊಪ್ಪು, ತುಳಸಿ,ಲವಂಗತುಳಸಿ, ಅರಸಿನ ಪುಡಿ ,ಕಾಳುಮೆಣಸು,ಜೀರಿಗೆ,ಶುಂಠಿ). ಇದರ ಐದಾರು ಎಲೆಗಳನ್ನು ಪ್ರತಿನಿತ್ಯ ಸೇವಿಸಬಹುದು. ಎಲೆಯು ಸ್ವಲ್ಪ ಕಹಿ ಮತ್ತು ಒಗರಿನಿಂದ ಕೂಡಿದೆ. ಎಲೆ ಮತ್ತು ಕಾಂಡದಿಂದ ತಂಬುಳಿ ತಯಾರಿಸಬಹುದು. ಎಲೆ ಮತ್ತು ಕಾಂಡವನ್ನು ಜೀರಿಗೆಯೊಂದಿಗೆ ನುಣ್ಣಗೆ ಅರಿಯಬೇಕು. ಅದಕ್ಕೆ ಮಜ್ಜಿಗೆ ಸೇರಿಸಿ ಸಾಸಿವೆ ಒಗ್ಗರಣೆ ಕೊಟ್ಟರೆ ತಂಬುಳಿ ತಯಾರು. ಈ ಬಳ್ಳಿಯ ಮೇಲೆ ಬೀಸಿ ಬರುವ ಗಾಳಿಯು ಆರೋಗ್ಯಕ್ಕೆ ಹಿತಕಾರಿ ಮತ್ತು ಮನೆಗೆ ತಂಪು

ಕೃಪೆ : ಸಸ್ಯ ಕಣಜ 

ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಪುನರ್ಪುಳಿ

ಪುನರ್ಪುಳಿ
ಆಹಾರ ಶೈಲಿಯಲ್ಲಾದ ಬದಲಾವಣೆ, ಅನಿಯಮಿತ ಸಮಯದಲ್ಲಿ ಆಹಾರ ಸೇವನೆ ಹೀಗೆ ಹಲವಾರು ಕಾರಣದಿಂದ ದೇಹದಲ್ಲಿ ಪಿತ್ತ ಹೆಚ್ಚಾಗುವ ಮೂಲಕ ಆಹಾರ ಸೇವನೆಯಲ್ಲಿ ಅರುಚಿ, ವಾಕರಿಕೆ ಬರುವಂತಾಗುವುದು ಹೀಗೆ ಹಲವು ರೀತಿಯಲ್ಲಿ ದೇಹಕ್ಕೆ ತೊಂದರೆಯುಂಟಾಗುತ್ತದೆ. ಇಂತಹ ಸಮಯದಲ್ಲಿ ದೇಹದಲ್ಲಿನ ಅಧಿಕ ಪಿತ್ತವನ್ನು ಕಡಿಮೆ ಮಾಡಲು ‘ಪುನರ್ಪುಳಿ’ ಅತ್ಯಂತ ಸಹಕಾರಿ.
ಪಶ್ಚಿಮ ಘಟ್ಟದಲ್ಲಿ ಯಥೇಚ್ಚವಾಗಿ ಬೆಳೆಯುವ ಪುನರ್ಪುಳಿಗೆ ಸ್ಥಳೀಯವಾಗಿ ಮುರುಗಲು ಎಂಬ ಹೆಸರಿದ್ದು, ಯಾವುದೇ ಪೋಷಣೆಯ ಅಗತ್ಯವಿಲ್ಲದೆ ಬೆಳೆಯುವ ಇದು ಏಪ್ರಿಲ್-ಮೇ ಯಲ್ಲಿ ಹಣ್ಣು ಬಿಡುತ್ತದೆ.
ಉಪಯೋಗ ಹೇಗೆ..?
ಚೆನ್ನಾಗಿ ಹಣ್ಣಾದ ಬೀಜ ತೆಗೆದು ಹೊರಗಿನ ಸಿಪ್ಪೆಯನ್ನು ಒಣಗಿಸಿ ಇಟ್ಟರೆ ವರುಷವಿಡೀ ಸಾರು ಮತ್ತು ಶರಬತ್ತು ಮಾಡಬಹುದಾಗಿದೆ. ಅಲ್ಲದೇ ತಾಜಾ ಹಣ್ಣಿನ ತಿರುಳನ್ನು ಹಿಂಡಿ ಅದರ ರಸದಿಂದಲೂ ಶರಬತ್ತು ಮಾಡಬಹುದು. ಇದರ ಬೀಜದಿಂದ ಎಣ್ಣೆಯನ್ನು ತಯಾರಿಸಬಹುದಾಗಿದ್ದು ಇದು ಕಾಲು ಒಡೆತಕ್ಕೆ ಪರಿಣಾಮಕಾರಿ ಮದ್ದಾಗಿದೆ.
ಸ್ವಲ್ಪ ಕಾಳುಮೆಣಸು, ಬೆಲ್ಲ, ಉಪ್ಪು ಹಾಕಿ ಕುದಿಸಿ ಕರಿಬೇವು, ಜೀರಿಗೆ ಮತ್ತು ಸಾಸಿವೆಯನ್ನು ತುಪ್ಪದಲ್ಲಿ ಒಗ್ಗರಣೆ ಹಾಕಿ ತಯಾರಿಸಿದ ಸಾರು ಪಿತ್ತವನ್ನು ನಿವಾರಿಸುತ್ತದೆ. ಈ ಪುನರ್ಪುಳಿಯಲ್ಲಿ ಕೆಂಪು ಮತ್ತು ಬಿಳಿ ಎಂಬ ಎರಡು ಪ್ರಬೇಧಗಳಿದ್ದು, ಪಿತ್ತ ನಿವಾರಣೆಗೆ ಬಿಳಿಯದ್ದು ಅತ್ಯುತ್ತಮವಾಗಿದೆ. ಪುನರ್ಪುಳಿ ಸಿಪ್ಪೆಯನ್ನು ಅಡುಗೆಯಲ್ಲಿ ಬಳಸಿದರೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇದು ಹೃದಯದ ಸಮಸ್ಯೆಯಿಂದಲೂ ದೂರವಿರಿಸಲು ಸಹಕಾರಿಯಾಗುತ್ತದೆ.
ಇಷ್ಟು ಮಾತ್ರವಲ್ಲದೇ ಶೀತ, ಕೆಮ್ಮು ಗುಣಪಡಿಸಲು, ಹಸಿವು ಹೆಚ್ಚಿಸಲು, ಬೊಜ್ಜು ಕರಗಿಸಲು ಪುನರ್ಪುಳಿಯನ್ನು ಉಪಯೋಗಿಸುತ್ತಿದ್ದು ಸಿಪ್ಪೆ ಒಣಗಿಸಿಟ್ಟರೆ ಅದರಿಂದ ಶರಬತ್ತನ್ನು ಬೇಕೆಂದಾಗ ತಯಾರಿಸಬಹುದು.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಎಕ್ಕ


ಅರ್ಕ,' ಎಂದರೆ, ಪೂಜನೀಯವೆಂದರ್ಥ. 'ತೈತ್ತರೀಯ ಸಂಹಿತೆ,' ಯಲ್ಲಿ ಅರ್ಕ, ಉಷ್ಣ ಮತ್ತು ತೀಕ್ಶ್ಣ ಗುಣಗಳನ್ನು ಹೊಂದಿದೆಯೆಂದು ಹೇಳಲಾಗಿದೆ. 'ಅಥರ್ವ ಶೌನಕೇಯ ಸಂಹಿತೆ,' ಯಲ್ಲಿ 'ಅರ್ಕಮಣಿ' 'ವಾಜೀಕರಣ,' (ಸಂತಾನ ಸಾಮರ್ಥ್ಯ ಸಂವರ್ಧನೆ) ದಂತೆ ಕಾರ್ಯ ನಿರ್ವಹಿಸುತ್ತದಯೆಂದು ತಿಳಿಸಲಾಗಿದೆ.
ಎಕ್ಕದ ಯಾವುದೇ ಭಾಗವನ್ನಾಗಲಿ ಔಷಧರೂಪದಲ್ಲಿ ಸೇವನೆಗೆ ನೀಡಬೇಕಾದಲ್ಲಿ, ಆ ಭಾಗವನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಕೊಂಡು ೭ ಸಾರಿ ಹಸುವಿನ-ಹಾಲಿನಲ್ಲಿ ಭಾವನೆ ಕೊಟ್ಟು ಅನಂತರ ೭ ಬಾರಿ ಎಣ್ಣೆ-ಹಾಲಿನಲ್ಲಿ ಭಾವನೆಕೊಟ್ಟು ಉಪಯೋಗಿಸಬೇಕು.ಯಾವುದೇ ಬಗೆಯ ಜ್ವರವಿದ್ದರೆ, ಎಕ್ಕದ ಬೇರನ್ನು ನಿಂಬೇಹಣ್ಣಿನ-ರಸದಲ್ಲಿ ಅರೆದು ಸೇವಿಸಿದರೆ ಉಪಶಮನವಾಗುತ್ತದೆ.ಚೇಳುಕಡಿದಲ್ಲಿ ಎಕ್ಕದ ಬೇರನ್ನು ತಣ್ಣೀರಿನಲ್ಲಿ ಅರೆದು ಕುಡಿಯಬೇಕು.ಕಫದಿಂದ ಕೂಡಿದ ಕೆಮ್ಮಿದ್ದರೆ,ಎಕ್ಕದ ಬೇರಿನ ತೊಗಟೆಯನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಂಡು ೫ ಚಿಟಿಕೆಯಷ್ಟನ್ನು ಜೇನುತುಪ್ಪದೊಂದಿಗೆ ಸೇರಿಸಿ ದಿನಕ್ಕೆ ಎರಡುಬಾರಿ ಸೇವಿಸಬೇಕು.ಮುಖದ ಮೇಲೆ ಕಪ್ಪು ಚುಕ್ಕೆಗಳಿದ್ದರೆ, (ಬಂಗು) ಎಕ್ಕದ ಬೇರನ್ನು ನಿಂಬೆರಸದಲ್ಲಿ ತೇದು ಅದಕ್ಕೆ ಸ್ವಲ್ಪ ಪುನುಗು ಸೇರಿಸಿ ಲೇಪಿಸಿ ಮೃದುವಾಗಿ ಹಚ್ಚಿಕೊಳ್ಳಬೇಕು.ಅಂಗಾಲಿನಲ್ಲಿ ಮುಳ್ಳು ಸೇರಿಕೊಂಡಿದ್ದರೆ, ಮುಳ್ಳನ್ನು ನಿಧಾನವಾಗಿ ತೆಗೆದು ನಂತರ ಎಕ್ಕದ ಹಾಲನ್ನು ಆ ಜಾಗಕ್ಕೆ ಹಾಕುವುದರಿಂದ ಮುಳ್ಳಿನ ವಿಷದ ಬಾಧೆ ನಿವಾರಣೆಯಾಗುತ್ತದೆ.'ಮೂಲವ್ಯಾಧಿ,' ಯಿಂದ ಬಳಲುವವರಿಗೆ ಎಕ್ಕದ ಹಾಲಿಗೆ ಅರಿಶಿನ ಬೆರೆಸಿ ಮೊಳಕೆಗಳಿಗೆ ಲೇಪಿಸುವುದರಿಂದ ಬೇಗ ಗುಣವಾಗುತ್ತದೆ.ಎಕ್ಕದ ಕಾಂಡವನ್ನು ಹಲ್ಲುಜ್ಜಲು ಬಳಸಬಹುದು. 'ಹಲ್ಲುನೋವಿಗೆ,' ಇದು ಬಹಳ ಒಳ್ಳೆಯದು.'ಮೂತ್ರಕಟ್ಟಿದ್ದಲ್ಲಿ,' ಎಕ್ಕದ ಎಲೆಗಳನ್ನು ಒಣಗಿಸಿ ನಯವಾಗಿ ಪುಡಿಮಾಡಿಟ್ಟುಕೊಂಡು ೧೦ ಗ್ರಾಂ ನಷ್ಟನ್ನು ಬಿಸಿನೀರಿನಲ್ಲಿ ಬೆರಸಿ ಕುಡಿಸುವುದರಿಂದ 'ಮೂತ್ರವಿಸರ್ಜನೆ,' ಸುಗಮವಾಗುತ್ತದೆ.ಮೇಲಿಂದ-ಮೇಲೆ 'ಅಜೀರ್ಣ,' ದ ತೊಂದರೆ ಕಾಡುತ್ತಿದ್ದರೆ, ಎಕ್ಕದ ಬೇರಿನ ಭಸ್ಮವನ್ನು ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ,ಜೇನುತುಪ್ಪದೊಂದಿಗೆ ಸೇವಿಸತಕ್ಕದ್ದು.'ಗಾಯ,' ಗಳಿಗೆ ಮತ್ತು 'ವೃಣ,' ಗಳಿಗೆ ಒಣಗಿಸಿದ ಎಲೆಯನ್ನು ಪುಡಿಮಾಡಿಟ್ಟುಕೊಂಡು ಸಿಂಪಡಿಸಬೇಕು.ಮಹಿಳೆಯರಿಗೆ 'ಮುಟ್ಟಿನ ಪ್ರಕ್ರಿಯೆ ಅನಿಯಮಿತವಾಗಿದ್ದಲ್ಲಿ,'ಎಕ್ಕದ ಹೂವು, ಬೆಲ್ಲ ಸೇರಿಸಿ,ಅರೆದು ಗುಳಿಗೆಮಾಡಿಕೊಂಡು, ದಿನಕ್ಕೆ ೩-೪ ಮಾತ್ರೆಯಂತೆ ಸೇವಿಸುವುದು ಉತ್ತಮ.'ಬಿಳಿಸೆರಗಿನಿಂದ ಬಳಲುತ್ತಿರುವ ಮಹಿಳೆಯರು',ಎಕ್ಕದ ಹೂವನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಒಂದು ಚಿಟಿಕೆ ಪುಡಿಯನ್ನು ಜೇನುತುಪ್ಪಕ್ಕೆ ಸೇರಿಸಿ ೧೫ ದಿನಗಳ ವರೆಗೆ ಸೇವಿಸತಕ್ಕದ್ದು.ಅಜೀರ್ಣವಿದ್ದರೆ, ಎಕ್ಕದ ೧೦ ಹೂಗಳಿಗೆ ಒಂದು ಚಿಟಿಕೆ ಉಪ್ಪು ಬೆರೆಸಿ ತಿನ್ನಬೇಕು.ಕ್ರಿಮಿಕೀಟಗಳು, ಕಜ್ಜಿ,ಊತ, ಉರಿ ಬಾಧಿಸುತ್ತಿದ್ದರೆ, ಎಕ್ಕದ ಹಾಲನ್ನು ಅದರಮೇಲೆ ಲೇಪಿಸಿದರೆ, ಉಪಶಮನ ದೊರೆಯುತ್ತದೆ

ಕೃಪೆ : ಸಸ್ಯ ಕಣಜ 


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಅಶೋಕ ವೃಕ್ಷ


ಅಶೋಕ ವೃಕ್ಷ
೧) ಸ್ತ್ರೀಯರ ಮಾಸಿಕ ಅತಿಸ್ರಾವ ಹತೋಟಿಗೆ:
೨೦ ಗ್ರಾಂ ಅಶೋಕ ಮರದ ಚಕ್ಕೆಯನ್ನು ಚೆನ್ನಾಗಿ ಜಜ್ಜಿ ೨೫೦ ಮಿಲೀ ಹಾಲಿನಲ್ಲಿ ಹಾಕಿ ಕಷಾಯ ಮಾಡುವುದು. ತಣ್ಣಗಾದ ಮೇಲೆ ಕಷಾಯವನ್ನು ಶೋಧಿಸಿ ಕೆಂಪು ಕಲ್ಲುಸಕ್ಕರೆ ಪುಡಿ ಸೇರಿಸಿ ಹೊತ್ತಿಗೆ ನಾಲ್ಕು ಟೀ ಚಮಚ ಸೇವಿಸಬೇಕು.
೨) ಸಂತಾನ ಪ್ರಾಪ್ತಿಗೆ:
ಸ್ತ್ರೀಯರ ಋತುಚಕ್ರ ಸರಿಯಿದ್ದು ಅಶೋಕ ಮರದ ಎಲೆಗಳನ್ನು ಒಂದು ವಾರ ಸೇವಿಸಿದರೆ ಸಂತಾನ ಭಾಗ್ಯ ಲಭಿಸುವುದು.
೩) ಮುಟ್ಟಿನ ಶೂಲೆ ಮತ್ತು ಗರ್ಭಸ್ರಾವ ತಡೆಗೆ:
ಗ್ರಾಂ ಅತಿಮಧುರ,೨೦ ಗ್ರಾಂ ಅಶೋಕ ಮರದ ಚಕ್ಕೆಯನ್ನು ನುಣ್ಣಗೆ ಚೂರ್ಣ ಮಾಡಿ ಎರಡು ಲೋಟ ನೀರು ಹಾಕಿ ಕಾಯಿಸಿ ಕಾಲು ಭಾಗ ಉಳಿಯುವಂತೆ ಕಷಾಯ ಮಾಡುವುದು. ತಣ್ಣಗಾದ ಮೇಲೆ ಈ ಕಷಾಯಕ್ಕೆ ಸ್ವಲ್ಪ ಕಲ್ಲುಸಕ್ಕರೆ ಸೇರಿಸಿ ದಿವಸಕ್ಕೆ ೨ ಬಾರಿ ೨ ಟೀ ಚಮಚ ಸೇವಿಸುವುದರಿಂದ ಸಮಸ್ಯೆ ಹತೋಟಿಗೆ ಬರುತ್ತದೆ.
೪) ಬಿಳಿಸ್ರಾವಕ್ಕೆ:
-೧೦ ಗ್ರಾಂ ಅಶೋಕ ಚಕ್ಕೆಯನ್ನು ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರು ಸೇರಿಸಿ ಕಷಾಯ ಮಾಡಿ ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.
– ಅತಿಮಧುರ ಚೂರ್ಣ, ಬೂದುಗುಂಬಳದ ಬೇರಿನ ಚೂರ್ಣ,ಅಶ್ವಗಂಧಿ ಚೂರ್ಣ ಮತ್ತು ಉದ್ದಿನ ಹಿಟ್ಟು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರ ಮಾಡಿ, ೫ ಗ್ರಾಂ ಚೂರ್ಣವನ್ನು ಕಲ್ಲುಸಕ್ಕರೆ ಪುಡಿ ಸೇರಿಸಿದ ಹಾಲಿನಲ್ಲಿ ದಿವಸಕ್ಕೆ ಎರಡು ಬಾರಿ ತೆಗೆದುಕೊಂಡಲ್ಲಿ ಶ್ವೇತ ಪದರ ಹತೋಟಿಗೆ ಬರುತ್ತದೆ.
೫) ರಕ್ತ ಪಿತ್ತದ ನಿವಾರಣೆಗೆ:
ಅರ್ಧ ಟೀ ಚಮಚ ನುಣ್ಣಗಿರುವ ಜೀರಿಗೆ ಪುಡಿ ಮತ್ತು ಒಂದು ಟೀ ಚಮಚ ಅಶೋಕ ಚಕ್ಕೆಯ ಚೂರ್ಣಕ್ಕೆ ಸ್ವಲ್ಪ ಕಲ್ಲುಸಕ್ಕರೆ ಪುಡಿ ಸೇರಿಸಿ ನೀರಿನೊಂದಿಗೆ ಸೇವಿಸಿದರೆ ಪರಿಹಾರ ದೊರಕುವುದು.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಬನ್ನಿ ವೃಕ್ಷ ಅಥವಾ ಶಮಿ ವೃಕ್ಷ


ಬನ್ನಿ ವೃಕ್ಷ,ಅಥವಾ ಶಮಿ ವೃಕ್ಷ
ವೃಕ್ಷಗಳಲ್ಲಿ ಅತಿ ಶ್ರೇಷ್ಠವಾದವು ಅರಳಿ, ಔದುಂಬರ, ತೆಂಗು ಹಾಗೂ ಶಮೀವೃಕ್ಷ. ಶಮೀವೃಕ್ಷಕ್ಕೆ ಇನ್ನೊಂದು ಹೆಸರು ಬನ್ನಿಮರ.
ಈ ವೃಕ್ಷ ದೈವಸ್ವರೂಪಿ. ವಿಜಯದಶಮಿ ಬಂತೆಂದರೆ 'ಬನ್ನಿ' ಯನ್ನು ನೆನೆಯದವರಿಲ್ಲ. ಸಂಭ್ರಮದ ದಸರಾಕ್ಕೆ ತೆರೆ ಬೀಳುವುದು ಈ ಬನ್ನಿ ಮರದಿಂದಲೇ.
ಜಾರ್ವ ಎಂಬ ಮಹಾತಪಸ್ವಿ ಹಾಗೂ ಆತನ ಪತ್ನಿ ಸಮೇಧರಿಗೆ ಶಮೀಕಾ ಎಂಬ ಸುಂದರ ಮಗಳಿದ್ದಳು. ಮುದ್ದಾಗಿ ಬೆಳೆದ ಶಮೀಕಾಳಿಗೆ ಮದುವೆ ವಯಸ್ಸು ಬಂದಿತು. ನಂತರ ತಂದೆ-ತಾಯಿ ಧೌಮ್ಯ ಋಷಿಯ ಪುತ್ರನಾದ ಮಂದಾರನಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿದರು. ಮಂದಾರ ಕೌಶಿಕ ಮಹರ್ಷಿಯ ಶಿಷ್ಯನಾಗಿದ್ದರು. ನವ ದಂಪತಿ ಒಮ್ಮೆ ವಾಯುವಿಹಾರದಲ್ಲಿದ್ದಾಗ ವನದಲ್ಲಿ ಸೊಂಡಿಲುಗಳಿಂದ ಕೂಡಿದ ಭೃಶುಂಡಿ ಎಂಬ ಮುನಿಯನ್ನು ನೋಡಿದರು. ಅವರನ್ನು ನೋಡಿದ ದಂಪತಿಗೆ ನಗು ಬಂದಿತು.
ಇದನ್ನು ಗಮನಿಸಿದ ಭೃಶುಂಡಿಮುನಿ ನನ್ನನ್ನು ನೋಡಿ ಏತಕ್ಕಾಗಿ ಅಪಹಾಸ್ಯದ ನಗೆ ಬೀರಿದಿರಿ ಎಂದನು. ಆದರೂ ಆ ದಂಪತಿಗಳು ನಗುತ್ತಲೇ ಇದ್ದರು. ಭೃಶುಂಡಿ ಮುನಿಗೆ ಕೋಪ ತಡೆಯಲಾರದೆ ನೀವಿಬ್ಬರೂ ಯಾವ ಪ್ರಾಣಿಗಳಿಗೂ ಪ್ರಯೋಜನಕ್ಕೆ ಬಾರದ ಮರಗಳಾಗಿ ಜನಿಸಿರಿ ಎಂದು ಶಾಪವಿತ್ತರು. ಇದನ್ನು ಕೇಳಿದ ದಂಪತಿಗಳು ಹೆದರಿ ಮುನಿಯ ಪಾದಕ್ಕೆ ಎರಗಿ ತಮ್ಮ ತಪ್ಪಿಗೆ ಕ್ಷಮೆ ಕೇಳಿದರು ಹಾಗೂ ಈ ಶಾಪ ವಿಮೋಚನೆ ಯಾವಾಗ ಆಗುವುದು ಎಂದು ಕೇಳಿದರು. ಗಣಪತಿಯು ಪ್ರಸನ್ನವಾದಾಗ ಶಾಪ ವಿಮೋಚನೆ ಆಗುವುದು ಎಂದು ಹೇಳಿದರು. ಮುನಿಯ ಶಾಪದಂತೆ ಶಮೀಕಳು ಶಮೀವೃಕ್ಷವಾಗಿ, ಮಂದಾರನು ಮಂದಾರ ವೃಕ್ಷವಾಗಿ ಜನಿಸಿದರು. ನವ ದಂಪತಿ ಮನೆಗೆ ಬಾರದೆ ಇದ್ದರಿಂದ ತಂದೆ ತಾಯಿಗಳು ಹುಡುಕಿಕೊಂಡು ಕಾಡಿನೊಳಗೆ ಹೋದರು. ಅಲ್ಲಿ ಅವರು ಎರಡು ವಿಚಿತ್ರವಾದ ಮರಗಳನ್ನು ಕಂಡರು. ಅಲ್ಲದೆ ಋಷಿಯನ್ನು ಕೇಳಲು ನಡೆದ ಸಂಗತಿಯನ್ನು ತಿಳಿಸಿದರು.
ಶಾಪಗ್ರಸ್ತರಾಗಿದ್ದ ತನ್ನ ಅಳಿಯ ಮತ್ತು ಮಗಳಿಗೆ ದುರ್ವಾಸ ಮುನಿ ಹೇಳಿಕೊಟ್ಟಿದ್ದ ಗಣೇಶನ ಮಂತ್ರವನ್ನು ಹೇಳತೊಡಗಿದನು. ಮರಗಳ ರೂಪದಲ್ಲಿದ್ದ ಅಳಿಯ ಹಾಗೂ ಮಗಳು ಶ್ರದ್ಧಾಭಕ್ತಿಯಿಂದ ಮಂತ್ರವನ್ನು ಜಪಿಸುತ್ತಿದ್ದಂತೆ ಗಣಪತಿ ದರ್ಶನ ಕೊಟ್ಟನು. ಅವನ ದರ್ಶನದಿಂದ ಶಾಪ ವಿಮೋಚನೆಯಾಯಿತು. ಗಣಪತಿಯ ಅನುಗ್ರಹದಿಂದ ಮರಗಳಾಗಿದ್ದ ದಂಪತಿಗಳು ಮತ್ತೆ ಮೊದಲಿನಂತೆ ಆದರು.
ಶಮೀವೃಕ್ಷದ ಉಪಯೋಗ
* ಅರ್ಧಗಂಟೆ ಅಥವಾ ಒಂದು ಗಂಟೆ ಈ ಶಮೀವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡಿದರೆ ದೀರ್ಘಕಾಲೀನ ರೋಗಗಳಿದ್ದರೆ ಗುಣವಾಗುವುದು.
* ಹೃದ್ರೋಗ ಇದ್ದರೆ ಈ ಮರದ ಗಾಳಿಯನ್ನು ಪ್ರತಿದಿನ ಸೇವಿಸಿದ್ದರೆ ತೊಂದರೆ ನಿವಾರಣೆ ಆಗುವುದು.
* ಶಮೀ ವೃಕ್ಷ ಇರುವ ಸ್ಥಳದಲ್ಲಿ ಬಾವಿ ತೋಡಿಸಿದರೆ ಸಹಿ ನೀರು ಸಿಗುತ್ತದೆ.
* ವಾಸ್ತುದೋಷ ಇರುವ ಮನೆಯಲ್ಲಿ ಶಮೀವೃಕ್ಷದ ಎಲೆಯನ್ನು ದೇವರ ಮನೆಯಲ್ಲಿಟ್ಟರೆ ದೋಷ ನಿವಾರಣೆ.
* ಸಂತಾನಭಾಗ್ಯ ಇಲ್ಲದವರು ಈ ಶಮೀವೃಕ್ಷವನ್ನು ಬೆಳಗಿನ ಸಮಯದಲ್ಲಿ ಪ್ರದಕ್ಷಿಣಿ ಹಾಕಿದರೆ ಸಂತಾನ ಭಾಗ್ಯ ದೊರೆಯುವುದು.
* ದೀರ್ಘವಾದ ಕೆಮ್ಮು ಇದ್ದರೆ ಈ ವೃಕ್ಷದ ಚಕ್ಕೆಯಿಂದ ಕಷಾಯ ಮಾಡಿ ಕುಡಿದರೆ ಗುಣಮುಖವಾಗುವುದು.
* ವಿವಾಹಕ್ಕೆ ತಡೆಯಾದರೆ 48 ದಿನ ಈ ವೃಕ್ಷವನ್ನು ಪ್ರದಕ್ಷಿಣೆ ಹಾಕಬೇಕು.
* ಮಾಟ-ಮಂತ್ರ ಪ್ರಯೋಗವಾಗಿದ್ದರೆ ಈ ಮರಕ್ಕೆ 21 ದಿನ ಪೂಜೆ ಮಾಡಿದರೆ ಪ್ರಯೋಗದಿಂದ ಹೊರಬರಬಹುದು.
* ಪಾಂಡವರು ವನವಾಸದಲ್ಲಿದ್ದಾಗ ಅವರ ಶಸ್ತ್ರಗಳನ್ನು ಈ ಮರದ ಕೆಳಗೆ ಇಟ್ಟಿದ್ದರು.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಔದಂಬರ ವೃಕ್ಷ


ಔದಂಬರ ವೃಕ್ಷ
ಹಸಿರು ಬಣ್ಣದ, ಒಂದಡಿಯಷ್ಟು ಉದ್ದದ, ದೊಡ್ದ ಎಲೆಗಳನ್ನು ಹೊಂದಿರುವ ಔಡಬಲ ವೃಕ್ಷವು ೧೦ ರಿಂದ ೩೦ ಅಡಿ ಎತ್ತರಕ್ಕೆ ಬೆಳೆಯಬಲ್ಲುದು. ಫಿಕಸ್ ರೇಸಿಮೊಸ(ಫಿಕಸ ಗ್ಲೊಮೆರಾಟ) ಎಂಬ ವೈಜ್ಞಾನಿಕ ಹೆಸರುಳ್ಳ ಈ ಗಿಡವು ಮೊರಾಸೇ ಸಸ್ಯವರ್ಗಕ್ಕೆ ಸೇರಿದೆ. ಔದುಂಬರ ಸಂಸ್ಕ್ರತ ಪದವಗಿದ್ದು ಹಿಂದಿಯಲ್ಲಿ ಅಂಜೂರ್ ಎಂದೂ ಕನ್ನಡದಲ್ಲಿ ಅಂಜೂರ್/ ಅತ್ತಿ ಎಂದೂ ಕರೆಯುತ್ತಾರೆ. ಫಿಗ್ ಟ್ರೀ ಎನ್ನುವುದು ಆಂಗ್ಲ ಹೆಸರು. ಆಸ್ಟ್ರೇಲಿಯ, ಮಲೇಷ್ಯಾ, ಆಗ್ನೇಯ ಏಷ್ಯಾ ಮತ್ತು ಭಾರತೀಯ ಉಪಖಂಡದಲ್ಲಿ ಕಂಡುಬರುವ ಈ ಗಿಡವು ಒಣ-ಉಷ್ಣ ಹವೆಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಳೆಗಾಲದ ಆರಂಭ ಗಿಡ ನೆಡಲು ಸೂಕ್ತ ಕಾಲ. ಸಸಿ ಬಲಿಯುವ ತನಕ ಹೆಚ್ಚಿನ ನೀರು ಅಗತ್ಯ. ಒಂದು ವರ್ಷದಲ್ಲಿ ಕಾಯಿ ಬಿಡಲು ಶುರು ಮಾಡುವ ಈ ಮರಗಳು ೩೫ ವರ್ಷಗಳ ಕಾಲಾಬಾಳಿಕೆ ಹೊಂದಿರುತ್ತವೆ. ಹಣ್ಣುಗಳಲ್ಲಿ ನಾಲ್ಕು ವಿಧಗಳಿದ್ದು, ಕೊಯ್ಲಿನ್ ಸೀಸನ್ ಆಯಾ ಪ್ರದೇಶಕ್ಕೆ ತಕ್ಕಂತೆ ಬದಲಾಗುತ್ತದೆ. ಹೆಚ್ಚು ಮಾಗಿದ ಹಣ್ಣುಗಳು ಬಿರಿಯುವುದು ಉಂಟು. ಹೂವುಗಳು ಅತಿ ಚಿಕ್ಕದಾಗಿದ್ದು ಕಾಣಸಿಗುವುದು ಅಪರೂಪ. ಕಾಂಡಕ್ಕೆ ಅಂಟಿಕೊಂಡು ಗೊಂಚಲು ಕಾಯಿಗಳನ್ನು ಬಿಡುವುದು ಇದರ ವೈಶಿಷ್ಟ್ಯ. ಜೆಲ್ಲಿಯಂತಹ ಮಾಂಸಲ ತಿರುಳುಳ್ಳ ಸಿಹಿ ಸಹಿತ ಸ್ವಾದಿಷ್ಟ ಅಂಜೂರ ಹಣ್ಣುಗಳು ಕೇಂದ್ರ ಭಾಗದಲ್ಲಿ ಬೀಜ ಪುಂಜಗಳಿದ್ದು, ಅವುಗಳನ್ನು ಸಾಮಾನ್ಯವಾಗಿ ಕಣಜೀರಿಗೆ ಹುಳಗಳ ಭಾದಿಸುತ್ತವೆ. ಆದ್ದರಿಂದ ಹಣ್ಣುಗಳನ್ನು ೨-೩ ಹೋಳುಗಳಾಗಿಸಿ ಕಡು ಬಿಸಲಲ್ಲಿ ಸುಮಾರು ಒಂದು ಗಂಟೆ ಒಣಗಿಸಿ ಬಳಿಕ ತಿನ್ನುವುದು ಒಳ್ಳಯದು. ಪ್ರತಿಶತ ೯೦ ರಷ್ಟು ಔದುಂಬರದ ಹಣ್ಣುಗಳನ್ನು ಒಣಗಿಸಿಯೇ ಡ್ರ್ಯೆಫ್ರುಟ್ ಅಗಿ ಉಪಯೋಗಿಸುತ್ತಾರೆ. ಇದು ದತ್ತಾತ್ರೇಯರ ಪ್ರಿಯವಾದ ವೃಕ್ಷವಾಗಿದೆ .
ಗುಣ ವಿಶೇಷಗಳು :-
ಉಷ್ಣ ಗುಣ ಹೊಂದಿರುವ ಅತ್ತಿ ಹಣ್ಣು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಜೇನುತುಪ್ಪದೊಡನೆ ಸೇವಿಸಿದರೆ ಮೂತ್ರದಲ್ಲಿ ಅಥವಾ ಮಲದಲ್ಲಿ ರಕ್ತ ಹೋಗುವುದನ್ನು ಗುಣಪಡಿಸುತ್ತದೆ.ಹಣ್ಣನ್ನು ತಿನ್ನುವುದರಿಂದ ಕಫದ ಬಾಧೆ, ರಕ್ತನಾಳದ ದೋಷ ಉಪಶಮನವಾಗುತ್ತದೆ.ಅತ್ತಿಮರದ ಹಾಲಿಗೆ ಭೇದಿ(ಅತಿಸಾರ) ನಿಲ್ಲಿಸುವ ಶಕ್ತಿಯಿದೆ.ಮರದ ಚಕ್ಕೆಯ ಕಷಾಯ ಗರ್ಭ ರಕ್ಷಣೆಯ ಗುಣವುಳ್ಳದ್ದಾಗಿದ್ದು, ಮಧುಮೇಹ ರೋಗಿಗಳಿಗೂ ಸೂಕ್ತವಾದದ್ದು 

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಗರಿಕೆ ಹುಲ್ಲು


ಗರಿಕೆ ಹುಲ್ಲು
ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಹಾಗೆಂದು ಹಸಿ ಹುಲ್ಲನ್ನೇ ತಿನ್ನಬೇಕಾಗಿಲ್ಲ. ಏನು ಮಾಡಬಹುದು ನೋಡೋಣ.
* ಒಂದು ಹಿಡಿ ಗರಿಕೆಯನ್ನು ಎರಡು ಲೋಟ ನೀರಿನಲ್ಲಿ ಹಾಕಿ, ಆ ನೀರು ಸ್ವಲ್ಪ ಬತ್ತುವವರೆಗೆ ಕುದಿಸಿ ನಂತರ ಆ ನೀರನ್ನು ಕುಡಿದರೆ ಹಳೆಯ ಔಷಧಿಗಳ ಅವಶೇಷಗಳೆಲ್ಲ ಶರೀರದಿಂದ ಮಾಯವಾಗುತ್ತದೆ. ಒಂದು ತಿಂಗಳವರೆಗೆ ಈ ಕಷಾಯವನ್ನು ಕುಡಿಯಬೇಕಾಗುತ್ತದೆ.
*ಗರಿಕೆ ಮತ್ತು ಸ್ವಲ್ಪ ಜೀರಿಗೆಯನ್ನು ನೀರಿನಲ್ಲಿ ಕುದಿಸಿ ಆ ಕಷಾಯವನ್ನು ಕುಡಿದರೆ ವಾಯುವಿನಿಂದಾಗುವ ಬೆನ್ನು ಮತ್ತು ಸೊಂಟನೋವು ಕಡಿಮೆಯಾಗುತ್ತದೆ . ಈ ಕಷಾಯವನ್ನು ಸುಮಾರು ಒಂದು ತಿಂಗಳ ಕಾಲ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅಜೀರ್ಣದ ಸಮಸ್ಯೆಗಳು , ಹಸಿವಿಲ್ಲದಿರುವುದು ಎಲ್ಲದಕ್ಕೂ ಒಳ್ಳೆಯದು. ಅನಗತ್ಯ ಕೊಲೆಸ್ಟರಾಲ್ ಕೂಡಾ ಕಡಿಮೆಯಾಗುತ್ತದೆ .
*ತೆಂಗಿನ ಎಣ್ಣೆಯಲ್ಲಿ ಗರಿಕೆಯನ್ನು ಕುದಿಸಿ ಆರಿಸಿ ತಲೆಗೆ ಹಚ್ಚಿದರೆ, ಶರೀರದ ಉಷ್ಣದಿಂದಾಗುವ ತಲೆಹೊಟ್ಟು ಕಡಿಮೆಯಾಗುವುದು.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ನೀರು ಮತ್ತಿ, ಹೊಳೆ ಮತ್ತಿ


ನೀರು ಮತ್ತಿ, ಹೊಳೆ ಮತ್ತಿ
ಅರ್ಜುನ ( Terminalia arjuna, Combreteaceae ಕುಟುಂಬ ). ಕನ್ನಡದಲ್ಲಿ ನೀರು ಮತ್ತಿ, ಹೊಳೆ ಮತ್ತಿ ಇತ್ಯಾದಿ ಹೆಸರುಗಳ ಇವೆ. ಸಾಮಾನ್ಯವಾಗಿ ಸುಮಾರು 30 ಕ್ಕೂ ಹೆಚ್ಚು ಎತ್ತರ ಬೆಳೆಯುವ ಬಹುವಾರ್ಷಿಕ ಮರ. ತಾಂಜವೂರಿನ ಕಾವೇರಿ ನದಿ ತೀರದಲ್ಲಿ ಸುಮಾರು 70 ಅಡಿಗೂ ಎತ್ತರದ 600 ವರ್ಷ ಹಳೆಯ ಮರವನ್ನು ಕಳೆದವರ್ಷ ನೋಡಿದ್ದೆ.
ಸುಮಾರು 3,000 ವರ್ಷಗಳ ಹಿಂದೆಯೇ ನಮ್ಮ ಪುರಾಣಗಳಲ್ಲಿ ಉಲ್ಲೇಖವಾಗಿರುವ ಈ ಸಸ್ಯಕ್ಕೆ, 7 ನೇ ಶತಮಾನದಲ್ಲಿ ಇದ್ದ ಆಯುರ್ವೇದ ತಜ್ಞ ಹಾಗೂ ಮುನಿ ವಘಭಟ ( ವಾಗ ಭಟ್ಟ ) ಮಾನವನ ಎಲ್ಲಾ ತೊಂದರೆಗಳಿಗೆ ಏಕೈಕ ದಿವ್ಯ ಔಷದ ಈ ಅರ್ಜುನ ಎಂದು ಹೇಳಿದ್ದಾನೆ.
ಹೃದಯ ಸಂಬಂಧಿತ ಎಲ್ಲಾ ತೊಂದರೆಗಳಿಗೂ ರಾಮಬಾಣ ಅರ್ಜುನ. ಅರ್ಜುನದ ತೊಗಟೆಯ ಕಷಾಯ ಸೇವನೆಯಿಂದ, ಹೃದಯಕ್ಕೆ ರಕ್ತ ಪೂರೈಕೆ ಮಾಡುವ ರಕ್ತನಾಳಗಳು ಬಿಗಿಯಾಗದೆ ರಕ್ತ ಸಂಚಾರ ಸುಲಭವಾಗಿ ಹೃದಯ ಸ್ಥಂಭನ - Heart attack ಹಾಗೂ ಪಾರ್ಶುವಾಯು ಆಗುವುದನ್ನು ತಡೆಯಬಹುದು. ನಮ್ಮ ಹೃದಯವನ್ನು ಹಿಡಿದಿಟ್ಟುಕೊಂಡಿರುವ muscles ಗಳ ಚಲನೆಯನ್ನು ಸಮನಾಗಿ ಇರಿಸಿಕೊಳ್ಳುವ ಮೂಲಕ, ನಮ್ಮ ಹೃದಯದ ಬಡಿತ ಸಾಮಾನ್ಯ ಸ್ಥಿತಿಯಲ್ಲಿ ಸದಾಕಾಲ ಇರುವಂತೆ ಅರ್ಜುನ ನೋಡಿಕೊಳ್ಳುತ್ತದೆ.
ಅಷ್ಟೇ ಅಲ್ಲದೆ ಹಳೆಯ ಗಾಯಗಳು ಒಣಗಲು ( ವಿಶೇಷವಾಗಿ ಸಕ್ಕರೆ ಖಾಯಿಲೆ ಇರುವವರಿಗೆ ) ರಕ್ತ ಬೀಳುತ್ತಿರುವ ಮೂಲವ್ಯಾದಿ ಗುಣ ಪಡಿಸಲು, ಅಲ್ಲದೆ ಪಿತ್ತಕೋಶದ ತೊಂದರೆಗಳಿಗೆ ( ಕಾಮಾಲೆ - jaundice, ಮದ್ಯಪಾನ ದಿಂದ ಆಗಿರುವ Liver Cirrhosis ) ಗುಣಪಡಿಸುವುದು.
ಅರ್ಜುನದ ತೊಗಟೆಯ ಚೂರ್ಣವನ್ನು ರಕ್ತ ಚಂದನದ ಜೊತೆ ತೇಯ್ದು, ಸಕ್ಕರೆ ಹಾಗೂ ಅಕ್ಕಿ ತೊಳೆದ ನೀರಿನ ಜೊತೆ ಸೇವಿಸುವುದರಿಂದ ಕ್ಷಯರೋಗ ವಾಸಿಯಾಗುವುದಂತೆ.
ಅಲ್ಲದೆ ಯಾವುದೇ ಚರ್ಮ ಸಂಬಂಧಿ ತೊಂದರೆಗಳು, ರಕ್ತ ಭೇದಿ, ಆಮಶಂಕೆ ಅರ್ಜುನದಿಂದ ಗುಣವಾಗುವುದು.
ಅರ್ಜುನದ ಕ್ಷೀರ ಪಾಕ ಮಾಡುವ ವಿಧಾನ :- 1 : 8 : 32 ಪ್ರಮಾಣದಲ್ಲಿ, ಅರ್ಜುನದ ತೊಗಟೆಯ ಚೂರ್ಣ, ಹಸುವಿನ ಹಾಲು ಹಾಗೂ ನೀರು ತೆಗೆದುಕೊಂಡು ( 10 gm ಚೂರ್ಣ, 80 ml ಹಾಲು, 320 ml ನೀರು ) ಸಣ್ಣ ಉರಿಯಲ್ಲಿ ಕಾಯಿಸಿ 5 ನೇ 1 ಭಾಗಕ್ಕೆ ಇಳಿಸಬೇಕು ( 80 ಗ್ರಾಮ್ ನಷ್ಟು ) .

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಶಂಖಪುಷ್ಪ



ಶಂಖಪುಷ್ಪ
ಶಂಖಪುಷ್ಪ ನೋಡಲು ಸುಂದರ. ಅಷ್ಟೆ ಅಲ್ಲ ಆರೋಗ್ಯ ವರ್ಧಕವೂ ಹೌದು.
ಶಂಖದಂತೆ ಕಂಡು ಬರುವ ಈ ಹೂವಿಗೆ ಶಂಖ ಪುಷ್ಪ ಎಂದು ಹೆಸರು. ಬಿಳಿ ಮತ್ತು ನೀಲಿ ಬಣ್ಣದ ಪುಷ್ಪಗಳು ಕಂಡು ಬರುತ್ತದೆ (ಅನ್ಯ ಬಣ್ಣಗಳು ಕೂಡ ಇದೆ). ಬಳ್ಳಿಯಲ್ಲಿ ಬೆಳೆಯುವ ಈ ಹೂಗಳಿಗೆ ತಂಪಿನ ವಾತಾವರಣ ಅಗತ್ಯ. ಹಾಗೆ ನೀರು ಕೂಡ ಬಹಳ ಅಗತ್ಯ. ದೇವರ ಪೂಜೆಗೂ ಉಪಯೋಗಿಸುತ್ತಾರೆ.
ಬೀನ್ಸ್ ಬಳ್ಳಿಯಂತಿರುವ ಈ ಸಸ್ಯವು ಬೇರೆ ಗಿಡವನ್ನು ಆಧಾರವಾಗಿರಿಸಿಕೊಂಡು ಹರಡಿ ಬೆಳೆಯುತ್ತದೆ. ಹೂವಿನ ದಳಗಳು ಶಂಖದ ಒಳಭಾಗದ ಆಕಾರವನ್ನು ಹೊಂದಿರುವ ಕಾರಣ ಈ ಹೆಸರು ಬಂದಿದೆ. ಅದರಲ್ಲೂ ತೆಳ್ಳಗಿನ ಮತ್ತು ದಪ್ಪದ ದಳಗಳಿರುವ ಎರಡು ಜಾತಿಗಳಿವೆ. ಪರಿಮಳದ ಸೋಂಕಿಲ್ಲದ ಈ ಹೂವು ದೇವರ ಪೂಜೆಗೆ ವಿನಹ ಹೆಣ್ಣಿನ ಮುಡಿಗೇರುವುದಿಲ್ಲ. ಆದರೆ ಬಳ್ಳಿಯಾಗಿ ಹರಡಿ ವರ್ಷದುದ್ದಕ್ಕೂ ಬಿಳಿ ಅಥವಾ ನೀಲವರ್ಣದ ಹೂಗಳನ್ನು ಕೊಡುವ ಗಿಡ ಮನೆಯಂಗಳಕ್ಕೆ ಅಲಂಕಾರಿಕ.
ಇಂಗ್ಲಿಷಿನಲ್ಲಿ ಬಟರ್ ಫ್ಲೆಪಿಯೆ ಎಂಬ ಹೆಸರಿರುವ ಶಂಖಪುಷ್ಪ ಕ್ಲಿಟೋರಿಯ ಟಿರ್ನೆಟಿಯ (Clitoria Ternatea)
ಎಂದು ಸಸ್ಯಶಾಸ್ತ್ರದಲ್ಲಿ ಕರೆಯುತ್ತಾರೆ. ಬಿಳಿವರ್ಣದ ಹೂ ಬಿಡುವ ಶಂಖಪುಷ್ಪ ವೈದ್ಯ ದಷ್ಟಿಯಿಂದ ಹೆಚ್ಚು ಪ್ರಭಾವಶಾಲಿಯೆಂದು ಹೇಳಲಾಗಿದೆ. ಹೊಟ್ಟೆ ಸೆಳೆತ, ಪಚನದ ತೊಂದರೆ, ಪಿತ್ತಜನಕಾಂಗ, ಮೂತ್ರಪಿಂಡ, ಅನ್ನನಾಳ, ಪಿತ್ತಕೋಶಗಳ ಕಾಯಿಲೆ ಹಾಗೂ ಹೊಟ್ಟೆ ಉಬ್ಬರದ ತೊಂದರೆಗಳನ್ನು ಇವುಗಳ ಬಳಕೆಯಿಂದ ನಿವಾರಿಸಬಹುದೆಂದು ಆಯುರ್ವೇದ ಹೇಳಿದೆ.
ಅರೆತಲೆನೋವು ನಿವಾರಿಸಲು ಶಂಖಪುಷ್ಪದ ಬೇರನ್ನು ತೇದು ಅಂಜನದ ಹಾಗೆ ಕಣ್ಣಿಗೆ ಸವರಬೇಕು.
ಎಲೆಗಳ ರಸವನ್ನು ಬಿಸಿ ಮಾಡಿ ಲೇಪಿಸಿದರೆ ಬಾವು ನೋವು ಗುಣವಾಗುತ್ತದೆ.
ಬೇರಿನ ರಸವನ್ನು ಹಾಲಿನಲ್ಲಿ ಬೆರೆಸಿ ಶ್ವಾಸನಾಳಗಳ ಬಾಧೆ ನಿವಾರಣೆಗೆ ಬಳಸುವುದುಂಟು.
ಮುಖದಲ್ಲಿ ಬಿಳಿಕಲೆಗಳಿದ್ದರೆ ಬೇರನ್ನು ಕ್ಷಾರ ಮಾಡಿ ಎಳ್ಳೆಣ್ಣೆಯಲ್ಲಿ ಕಲಸಿ ಲೇಪಿಸಬಹುದು.
ಬೇರಿನ ತೊಗಟೆಯಿಂದ ತಯಾರಿಸಿದ ಚೂರ್ಣವನ್ನು ಜೀರಿಗೆ ಕಷಾಯದಲ್ಲಿ ಕದಡಿ ಜೇನುತುಪ್ಪ ಬೆರೆಸಿ ಸೇವಿಸಿದರೆ ದೇಹಬಾಧೆ ನಿವಾರಣೆ.
ಬೀಜವನ್ನು ಹುರಿದು ಹುಡಿ ಮಾಡಿ ಬೆಂಕಿ ಗುಳ್ಳೆಗಳ ನೋವು ಶಮನದ ಔಷಧಕ್ಕೆ ಬಳಸುತ್ತಾರೆ.
ಖಾಲಿ ಹೊಟ್ಟೆಗೆ ಬೇರು ತೇದಿ ಎರಡು ಚಮಚದಷ್ಟು ಒಂದು ಲೋಟ ನೀರಿನೊಂದಿಗೆ ಕುಡಿದರೆ ಉಬ್ಬಸದಿಂದ ಸಂಪೂರ್ಣ ಗುಣಮುಖರಾಗುವಿರಿ.
ವೈದ್ಯಗ್ರಂಥಗಳಲ್ಲಿ ಇದರ ಹೂವಿನಿಂದ ಉನ್ಮಾದ, ಅಪಸ್ಮಾರ ಇತ್ಯಾದಿ ಬಾಧೆ ಶಮನಕ್ಕೆ ತಯಾರಿಸುವ ಪಾನಕದ ವಿಧಿಗಳಿವೆ.
ಹುರಿದ ಬೀಜಗಳನ್ನು ಹುಡಿಮಾಡಿ ಬೀರಿನೊಂದಿಗೆ/ಮಜ್ಜಿಗೆಯೊಂದಿಗೆ ಜಾಂಡಿಸ್ ಕಾಯಿಲೆಗೆ ನಾಟಿ ಔಷಧಿಯಾಗಿ ಬಳಸುತ್ತಾರೆ. ಬೆಂಕಿ ತಾಗಿದ ಉರಿ ಶಮನಕ್ಕೆ ಬೀಜ ಅರೆದು ಲೇಪಸುತ್ತಾರೆ. ಹೊಟ್ಟೆ ಉಬ್ಬರದ ತೊಂದರೆಗಳನ್ನು ಶಂಖಪುಷ್ಪದ ಬಳಕೆಯಿಂದ ನಿವಾರಿಸಬಹುದೆಂದು ಆಯುರ್ವೇದ ಹೇಳಿದೆ. ಶಂಖಪುಷ್ಪದ ಎಲ್ಲಾ ಮದ್ದುಗಳಿಗೆ ರಕ್ತದ ಸಕ್ಕರೆ ಅಂಶವನ್ನು ಹೀರುವ ಗುಣವಿದ್ದು, ಸಕ್ಕರೆ ಕಾಯಿಲೆಯಿರುವ ರೋಗಿಗಳು ವೈದ್ಯರ ಸಲಹೆ ಮೇರೆಗೆ ಎಚ್ಚರಿಯಿಂದ ಇದರ ಮದ್ದುಗಳನ್ನು ಬಳಸುವುದು ಹಿತ. ಹೆಚ್ಚಾಗಿ ಮಳೆಗಾಲದಲ್ಲಿ ಬಲ್ಲೆಯಂತೆ ಹಬ್ಬುವ ಇದು ಅಲಂಕಾರಿಕ ಸಸ್ಯವೂ ಹೌದು. ದೇವರ ಪೂಜೆಗೆ ಹೇಳಿ ಮಾಡಿಸಿದ ಹೂವಿದು..ಅತ್ಯಪಯುಕ್ತ ಔಷಧೀಯ ಗುಣಗಳ ಆಗರವಾಗಿರುವ ಇಂತಹವುಗಳ ಬಗ್ಗೆ ಅರಿತು ಬೆಳೆಸಿ ಅಳಿಯದಂತೆ ಕಾಪಿಡುವ ಜವಬ್ದಾರಿ ನಮ್ಮ ನಿಮ್ಮೆಲ್ಲರದು.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಬಿಲ್ವ ಪತ್ರೆ


ಬಿಲ್ವ ಪತ್ರೆ
ಬಿಲ್ವಪತ್ರೆ ಶಿವನಿಗೆ ಅಚ್ಚುಮೆಚ್ಚು. ಬಿಲ್ವ ದರ್ಶನ ಮತ್ತು ಸ್ಪರ್ಶನ ಮಾತ್ರದಿಂದಲೇ ಪಾಪಗಳು ನಾಶವಾಗುತ್ತವೆ ಎನ್ನುತ್ತದೆ ಬಿಲ್ವಾಷ್ಟಕ. ಬಿಲ್ವ ವೃಕ್ಷ ದ ಪ್ರತಿಯೊಂದು ಭಾಗವು ಔಷಧಿಯುಕ್ತವಾಗಿದೆ. ಮರದಲ್ಲಿನ ವಿವಿಧ ಭಾಗಗಳು ವಿವಿಧ ಔಷಧಿ ಗುಣ ಕರ್ಮಗಳನ್ನು ಹೊಂದಿರುವುದು ವಿಶೇಷ.
ಬಿಲ್ವಪತ್ರೆ ಮೂರು ಉಪಪತ್ರೆಗಳಿಂದ ಕೂಡಿ ರೂಪಗೊಂಡಿದೆ. ಇದರ ಮೂರು ದಳಗಳು ತ್ರಿಗುಣಗಳ ತ್ರಿಮೂರ್ತಿಗಳ, ತ್ರಿಶಕ್ತಿಗಳ ಮತ್ತು ಓಂಕಾರ ಮೂಲ ಉತ್ಪತ್ತಿ ಅಕ್ಷ ರಗಳ ಸಂಖೇತವಾಗಿದೆ. ಏಕ ಬಿಲ್ವಂ ಅಂದರೆ ಮೂರು ಉಪಪತ್ರೆಗಳಿರುವ ಬಿಲ್ವಪತ್ರೆ ಎಂದು ತಿಳಿಯಬೇಕು.
ಔಷಧಿಯಾಗಿ ಬಿಲ್ವ :
ಉತ್ತರ ಭಾರತದ ಮೂಲನಿವಾಸಿಯಾದ ಈ ಮರ ಸಾಮಾನ್ಯವಾಗಿ ಉಷ್ಣ ಪ್ರದೇಶಗಳಲ್ಲಿ ಬೆಟ್ಟಗುಡ್ಡಗಳಲ್ಲಿ ಮತ್ತು ಶಿವನ ದೇವಾಲಯಗಳ ಸಮೀಪ ಹೆಚ್ಚು ಕಾಣುವುದು. ಬಾಂಗ್ಲದೇಶ, ಬರ್ಮಾ, ಥಾಯ್ಲೆಂಡ್‌, ಶ್ರೀಲಂಕಾ ಮತ್ತು ಪಾಕಿಸ್ತಾಸಗಳಲ್ಲಿ ಬೆಳೆಯುವುದು. ಮಧ್ಯಮ ಗಾತ್ರ ಬೆಳೆಯುವ ವೃಕ್ಷ . ಬೇಸಿಗೆಯಲ್ಲಿ ಎಲೆಗಳು ಉದುರುತ್ತವೆ. ಮರದ ಕಾಂಡವು ದೂಸರ ಬಣ್ಣದಿದ್ದು ಮುಳ್ಳುಗಳಿಂದ ಕೂಡಿದೆ.
ಬಿಲ್ವವು ಸಂಗ್ರಾಹಿಕ (ಹಿಡಿದಿಟ್ಟುಕೊಳ್ಳುವ ಕ್ರಿಯೆ) ದೀಪನ (ಹಸಿವನ್ನು ಹೆಚ್ಚಿಸುವ) ಮತ್ತು ಕಫವಾತಶಾಮಕ ಮಾಡುವ ಔಷಧಿಗಳಲ್ಲೇ ಸರ್ವಶ್ರೇಷ್ಠ ಔಷಧಿ ಬಿಲ್ವ ಎಂದು ಚರಕ ಸಂಹಿತೆಯಲ್ಲಿ ಉಲ್ಲೇಖವಿದೆ. ಆದ್ದರಿಂದ ಇದು ಜೀರ್ಣಕ್ರಿಯೆಗಳಿಗೆ ಸಂಬಂಧಿದ ರೋಗಗಳಲ್ಲಿ ಹೆಚ್ಚು ಬಳಕೆಯಲ್ಲಿದೆ.
ಬಿಲ್ವವು ಸಮಾನ್ಯವಾಗಿ ಲಘು,ರೂಕ್ಷ ಗುಣಗಳಿಂದ, ತಿಕ್ತ ರಸದಿಂದ ಕೂಡಿದ್ದು ಉಷ್ಣವೀರ್ಯ ಉಳ್ಳದ್ದು. ಜಠರಾಗ್ನಿಯನ್ನು ಮತ್ತು ಪಿತ್ತವನ್ನು ಹೆಚ್ಚು ಮಾಡುವುದು. ಕಫ ವಾತಹರವಾಗಿದೆ. ಆಹಾರವನ್ನು ಜೀರ್ಣಿಸುವಲ್ಲಿ ಪ್ರಮುಖ ಪಾತ್ರವಹಿಸುವುದು ಮತ್ತು ಬಲಕಾರಕವಾಗಿದೆ. ಬಿಲ್ವ ವೃಕ್ಷ ದ ಪ್ರತಿಯೊಂದು ಭಾಗವು ಔಷಧಿಯುಕ್ತವಾಗಿದೆ. ಮರದಲ್ಲಿನ ವಿವಿಧ ಭಾಗಗಳು ವಿವಿಧ ಔಷಧಿ ಗುಣ ಕರ್ಮಗಳನ್ನು ಹೊಂದಿರುವುದು ವಿಶೇಷ.
ದಶಮೂಲಾರಿಷ್ಟ ತಯಾರಿಕೆಯಲ್ಲಿ ಬಿಲ್ವದ ಬೇರನ್ನು ಉಪಯೋಗಿಸುವರು. ದಶಮೂಲಾರಿಷ್ಟವು ಉತ್ತಮ ವಾತಹರವಾಗಿದೆ. ನೋವುನಿವಾರಕ ಕಷಾಯಗಳಲ್ಲಿ ದಶಮೂಲ ಕ್ವಾಥವು ಅತ್ಯಂತ ಉಪಯೋಗವಾಗಿದೆ. ಬಾಣಂತಿಯರು ದಶಮೂಲಾರಿಷ್ಟವನ್ನು ಬಳಸುವುದರಿಂದ ಹೆರಿಗೆ ನಂತರದ ನೋವುಗಳು ನಿವಾರಣೆಯಾಗಿ ದೇಹ ಮತ್ತು ಗರ್ಭಾಶಯಕ್ಕೆ ಬಲ ಬರುವುದು.
ಧನ್ವಂತರಿ ಬಿಲ್ವ ಪತ್ರೆ
ಎಲೆಯ ತಾಜಾ ರಸವನ್ನು 10 ಎಂ.ಎಲ್‌ ಬೆಳೆಗ್ಗೆ ರಾತ್ರಿ ಕುಡಿಯುವುದರಿಂದ ಮಧುಮೇಹ ಹತೋಟಿಗೆ ಬರುವುದು. ಬಿಲ್ವದ ಹಣ್ಣಿನ ತಿರುಳನ್ನು ಬೆಲದ ಹಣ್ಣಿನ ತಿರುಳಿನಂತೆ ತಿನ್ನುವ ಅಭ್ಯಾಸ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಮಂಗರಸನ ಸೂಪಶಾಸ್ತ್ರದಲ್ಲಿ ಬಿಲ್ವದ ತಿರುಳಿನಿಂದ ಪಾನಕ ತಯಾರಿಸುವ ಕ್ರಮವನ್ನು ವಿವರಿಸಲಾಗಿದೆ. ತಿರುಳಿಗೆ ಬೆಲ್ಲ, ಎಲಕ್ಕಿ ಸೇರಿಸಿ ಪಾನಕ ಮಾಡಿ ಕುಡಿಯುವುದರಿಂದ ಬಾಯಾರಿಕೆ, ವಸಡುಗಳಲ್ಲಿ ರಕ್ತಸ್ರಾವ ಮತ್ತು ಬಾಯಿ ವಾಸನೆ ಬರುವುದು ನಿಲ್ಲುವುದು.
ಬಿಲ್ವ ಫಲದ ಅಂಶಗಳು
ಬಿಲ್ವ ಫಲದಲ್ಲಿ ಹೇರಳವಾದ ಪೋಷಕಾಂಶಗಳು ಇರುವುದರಿಂದ ಆಹಾರವಾಗಿಯೂ ಫಲ ಉಪಯುಕ್ತವಾಗಿದೆ. 100 ಗ್ರಾ ಹಣ್ಣಿನ ತಿರುಳಿನಲ್ಲಿ ತೇವಾಂಶ 62.2 ಗ್ರಾಂ, ಸಸಾರಜನಕ 1.8 ಗ್ರಾಂ, ಮೇದಸ್ಸು 0.39ಗ್ರಾಂ ಖನಿಜಪದಾರ್ಥ 1.7ಗ್ರಾಂ, ನಾರು 2.2 ಗ್ರಾಂ, ಶರ್ಕರ ಪಿಷ್ಟ 31.8 ಗ್ರಾಂ, ಸುಣ್ಣ 0.09 ಗ್ರಾಂ, ರಂಜಕ 0.05 ಗ್ರಾಂ, ಕಬ್ಬಿಣ 0.3 ಗ್ರಾಂ, 'ಎ' ಜೀವಸತ್ವ 186 ಐ.ಯು, ರೈಬೋಪ್ಲವಿನ್‌ 1.19ಮಿ.ಗ್ರಾಂ,ಥಯಾಮಿನ್‌ 0.13 ಮಿ.ಗ್ರಾಂ, ನಿಯಾಸಿನ್‌ 1.10 ಮಿ.ಗ್ರಾಂ, ನಿಕೋಟಿನ್‌ ಆಮ್ಲ 0.09 ಮಿ.ಗ್ರಾಂ, ಸಿ ಜೀವಸತ್ವ 15 ಮಿ.ಗ್ರಾಂ ಪೋಷಕಾಂಶಗಳಿರುತ್ತವೆ. 100 ಗ್ರಾಂ ಹಣ್ಣಿನ ತಿರುಳನ್ನು ತಿನ್ನುವುದರಿಂದ 129 ಕ್ಯಾಲೋರಿಗಳು ದೇಹಕ್ಕೆ ಸಿಗುತ್ತದೆ.
ಅತಿಸಾರ,ರಕ್ತಾತಿಸಾರ ಮತ್ತು ಆಮಶಂಕೆ ಭೇದಿಯಲ್ಲಿ ಬಿಲ್ವದ ಅಪಕ್ವ ಫಲವು ಹೆಚ್ಚು ಪರಿಣಾಮಕಾರಿಯಾಗಿದೆ. 12ಗ್ರಾಂ ಕಾಯಿಯ ತಿರುಳಿಗೆ 12ಗ್ರಾಂ ಬೆಲ್ಲ ಸೇರಿಸಿ ಸಿಹಿ ಮಜ್ಜಿಗೆಯೊಡನೆ ಕದಡಿ ಕುಡಿಯುವುದರಿಂದ ಭೇದಿ ನಿಲ್ಲುವುದು. ತಿರುಳನ್ನು ಒಣಗಿಸಿ ಪುಡಿ ಮಾಡಿಕೊಂಡು ಶೇಖರಿಸಿಕೊಂಡು ಉಪಯೋಗಿಸಬಹುದು.
ಅಪಕ್ವ ಹಣ್ಣಿನ ತಿರುಳಿಗೆ ಶುಂಠಿ, ಜೀರಿಗೆ ಹಾಕಿ ಕಷಾಯ ಮಾಡಿ ದಿನಕ್ಕೆರಡು ಬಾರಿ ಉಪಯೋಗಿಸುವುದರಿಂದ ಮೂಲವ್ಯಾಧಿ ಗುಣವಾಗುವುದು.
ಹಣ್ಣಿನ ಉಪಯೋಗ
ಪಕ್ವ ಹಣ್ಣಿನ ತಿರುಳನ್ನು ತಿನ್ನುವುದರಿಂದ ಮಲಜಾರಿಸುವುದು. ತಿರುಳನ್ನು ನೀರಿನಲ್ಲಿ ಕದಡಿ ಹಾಲು ಮತ್ತು ಸಕ್ಕರೆ ಸೇರಿಸಿ ಕುಡಿಯುವುದರಿಂದ ಮೂತ್ರ ಸರಗವಾಗಿ ಹೋಗುವುದು. ಹಣ್ಣಿನ ತಿರುಳಿಗೆ ಹಾಲಿನ ಕೆನೆ ಸೇರಿಸಿ ತಿನ್ನುವುದರಿಂದ ಮೆದುಳು ಮತ್ತು ಹೃದಯ ಬಲಗೊಳ್ಳುತ್ತವೆ. ರಕ್ತ ಹಿನತೆ ಕಡಿಮೆಯಾಗುವುದು.
ಪಕ್ವ ಹಣ್ಣಿನ ತಿರುಳನ್ನು ತಲೆಗೆ ಹಚ್ಚಿ ಸ್ವಲ್ವ ಹೊತ್ತು ಬಿಟ್ಟು ಸ್ನಾನ ಮಾಡುವುದರಿಂದ ತಲೆ ಹೊಟ್ಟು ನಿವಾರಣೆಯಾಗುವುದು ಮತ್ತು ಕೂದಲು ಹೊಳಪನ್ನು ಹೊಂದುವವು. ಹಣ್ಣಿನ ಫೇಸ್‌ ಪ್ಯಾಕ್‌ ಮಾಡುವುದರಿಂದ ಮುಖದ ಚರ್ಮಕ್ಕೆ ಬಲ ಬರುವುದು
ತೊಗಟೆಯಲ್ಲಿದೆ ಆರೋಗ್ಯ
ಬೇರು ಮತ್ತು ತೊಗಟೆಯ ಕಷಾಯವನ್ನು ತಯಾರಿಸಿಕೊಂಡು ಕುಡಿಯುವುದರಿಂದ ಮನಸ್ಸಿನ ಉದ್ವೇಗ ಕಡಿಮೆಯಾಗುವುದಲ್ಲದೆ ಹೃದಯಕ್ಕೆ ಹಿತವೆನ್ನಿಸುವುದು.
ಎಲೆಯನ್ನು ಅರೆದು ನೋವುವಿರುವ ಜಾಗಕ್ಕೆ ಕಟ್ಟಿದರೆ ನೋವು ಶಮನವಾಗುವುದು. ಎಲೆಯ ರಸಕ್ಕೆ ಕರಿಮೆಣಸು ಸೇರಿಸಿ ಕಮಾಲೆ ರೋಗದಲ್ಲಿ ಕೊಡುವರು.
ಬಿಲ್ವ ಪತ್ರೆಯ ರಸವನ್ನು ಖಾಲಿ ಹೊಟ್ಟೆಗೆ ದಿನಕ್ಕೆರಡು ಬಾರಿ ಸೇವಿಸುವುದರಿಂದ ಬೊಜ್ಜು ಕಡಿಮೆಯಾಗುವುದು.
ಬಿಲ್ವ ಸಂಶೋಧನೆಗಳ ಕಿರುನೋಟ :
ಬಿಲ್ವದ ಉತ್ತಮ ಔಷಧಿಗುಣಗಳನ್ನು ಅರಿತ ಆಧುನಿಕ ವೈಧ್ಯಕೀಯ ವಿಜ್ಞಾನ ಅದರ ಒಳಹೊಕ್ಕು ವಿಜ್ಞಾನದ ಅಳೆತೆಗೋಲಲ್ಲಿ ಔಷಧಿ ಕರ್ಮಗಳನ್ನು ವಿಸ್ತಾರವಾಗಿ ಅರಿತುಕೊಳ್ಳಲು ಬಿಲ್ವದ ಬಗ್ಗೆ ಪ್ರಯೋಗಿಕ ಸಂಶೋಧನೆಗಳನ್ನು ನಡೆಸಿದೆ. ಈ ಕೆಳಗಂಡ ವಿಚಾರಗಳು ಸಂಶೋಧನೆಗಳಿಂದ ದೃಢಪಟ್ಟಿವೆ.
* ಬಿಲ್ವದ ಎಲೆ ಮತ್ತು ಹಣ್ಣಿನ ತಿರುಳು ಮತ್ತು ಬೀಜ ಯಕೃತ್ತನ್ನು ರಕ್ಷಿಸುತ್ತವೆ.
* ಎಲೆಗಳಲ್ಲಿ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮತ್ತು ಹಣ್ಣಿನ ತಿರುಳಿನಲ್ಲಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಗುಣವಿದೆ.
* ಎಲೆಗಳಲ್ಲಿ ನೋವು ನಿವಾರಕ, ನಂಜು ನಿವಾರಕ, ಮತ್ತು ಜ್ವರಹರ ಮತ್ತು ಕ್ಯಾನ್ಸರ್‌ ಗುಣಪಡಿಸುವ ಗುಣಗಳಿವೆ. ಎಲೆ ಹೈಪರ್‌ಥೈರಾಡಿಸಮ್‌ನಲ್ಲಿ ಪರಿಣಾಮಕಾರಿಯಾದ ಔಷಧಿಯಾಗಿದೆ.
* ಕ್ಯಾನ್ಸರ್‌ಗೆ ರೇಡಿಯೇಷನ್‌ನಿಂದ ಚಿಕಿತ್ಸೆ ನೀಡುವಾಗ ಹಲವಾರು ದುಷ್ಪಾರಿಣಾಗಳು ಉಂಟಾಗುತ್ತವೆ. ಇದರಿಂದ ಆರೋಗ್ಯವಂತ ಜೀವಕೋಶಗಳೂ ನಾಶವಾಗುತ್ತವೆ. ಬಿಲ್ವ ರೇಡಿಯೋ ಪ್ರೋಟೆಕ್ಟೀವ್‌ ಆಗಿ ಕೆಲಸ ಮಾಡುವುದು. ರೇಡಿಯೇಷನ್‌ ನಂತರದ ಅಡ್ಡಪರಿಣಾಮಗಳಿಗೆ ಬಿಲ್ವ ಆಶಾಕಿರಣವಾಗಿದೆ.
* ಬಿಲ್ವಪತ್ರೆಯಕಾಯಿ ಮತ್ತು ಅದರ ಬೀಜವನ್ನು ಬಳಸುವುದರಿಂದ ಹೊಟ್ಟೆಯಲ್ಲಿ ಅಲ್ಸರ್‌ ಗುಣವಾಗುತ್ತದೆ.
ಶಿವನಿಗೆ ಇಷ್ಟವಾದ ಬಿಲ್ವ ಮಾನವ ಆರೋಗ್ಯ ರಕ್ಷಿಸುವ ಬಹು ಉಪಯೋಗಿ ವೃಕ್ಷ ವಾಗಿದೆ. ಬನ್ನಿ ಈ ಶಿವರಾತ್ರಿಯಂದು ಬಿಲ್ವವನ್ನು ಪೂಜಿಸಿ ಅದನ್ನು ಶಿವನಿಗೆ ಅರ್ಪಿಸಿ ದೇಹಾರೋಗ್ಯದೊಂದಿಗೆ ಮಾನಸಿಕ ನೆಮ್ಮದಿ ಪಡೆಯುವ.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಮುಟ್ಟಿದರೆ ಮುನಿ


ಮುಟ್ಟಿದರೆ ಮುನಿ
ಸಸ್ಯ ಪರಿಚಯ:-
ಆಡುಭಾಷೆಯಲ್ಲಿ ನಾಚಿಗೆ ಮುಳ್ಳು,ಮುಟ್ಟಿದರೆ ಮುಚಕ,ಮುಚ್ಗನ್ ಮುಳ್ಳು,ಪತಿವ್ರತೆ,ಮುಟ್ಟಿದರೆ ಮುನಿ,ಲಜ್ಜಾವತಿ,ಸಂಸ್ಕೃತದಲ್ಲಿ "ಅಂಜಲೀ ಕಾರಿಕೆ" ಆಂಗ್ಲದಲ್ಲಿ ಟಚ್ ಮಿ ನಾಟ್, ಹಿಂದಿಯಲ್ಲಿ ಚುಯ್ ಮುಯ್, ಸಸ್ಯಶಾಸ್ತ್ರೀಯ ಹೆಸರು ‘ಮಿಮೊಸ ಪುಡಿಕಾ’ (Mimosa Pudica) ಏಂದೆಲ್ಲಾ ಕರೆಸಿಕೊಂಡು (Touch me not) ಯಾರಿಗೂ ಬೇಡವಾಗಿ ಬೆಳೆಯುವ ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣವಿದೆ.ಇದರ ಮೂಲ ದಕ್ಷಿಣ ಹಾಗೂ ಮಧ್ಯ ಅಮೆರಿಕ. ಮೈತುಂಬ ಮುಳ್ಳು, ಎಲೆಗಳನ್ನು ಮುಟ್ಟಿದೊಡನೆ ಮುದುಡಿಕೊಳ್ಳುತ್ತದೆ ಸ್ಪರ್ಶ ತಾಕಿದೊಡನೆ ನಾಚಿ ಕೆಂಪಾಗಿ, ಮುಸುಕೊದ್ದು ಕುಳಿತಂತೆ ಭಾಸವಾಗುತ್ತದೆ.ಇದೊಂದು ಪ್ರಕೃತಿಯ ರಹಸ್ಯವಾಗಿದ್ದು ಸಸ್ಯವು ತನ್ನನ್ನು ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಳವಡಿಸಿಕೊಂಡಿರುವ ತಂತ್ರವಿದು. ಈ ಸಸ್ಯವು ಹಸಿರು ಹುಲ್ಲು ಮೇಯುವ ಪ್ರಾಣಿಗಳಿಗೆ ಉತ್ತಮ ಆಹಾರವಾಗಿದ್ದು, ಹಸಿರಿನಿಂದ ಕಂಗೊಳಿಸುವ ಈ ಸಸ್ಯವನ್ನು ನೋಡಿದಾಕ್ಷಣ ಮೇಯಲು ಧಾವಿಸುತ್ತವೆ. ಆಗ ತನ್ನನ್ನು ರಕ್ಷಿಸಿಕೊಳ್ಳಲು ಮುದುರಲು ಆರಂಭಿಸಿದ ತಕ್ಷಣ ಒಂದಕ್ಕೊಂದು ತಗುಲುತ್ತಾ ಹೋಗಿ ಕ್ಷಣ ಮಾತ್ರದಲ್ಲಿ ವಿಶಾಲ ಪ್ರದೇಶದಲ್ಲಿ ಹರಡಿದ ಈ ಸಸ್ಯ ಮುದುಡಿಕೊಳ್ಳುತ್ತದೆ. ಇದರಿಂದ ಮೇಯುವ ಪ್ರಾಣಿಗಳಿಗೆ ಅಲ್ಲಿ ಕೇವಲ ಒಣಗಿದ ಸಸ್ಯಗಳಂತೆ ಕಂಡುಬರುತ್ತದೆ. ಇದರಿಂದ ಪ್ರಾಣಿಗಳು ಬೇರೆಡೆಗೆ ಹೋಗುತ್ತವೆ. ದೀರ್ಘಾವಧಿ ಕಳೆ ಗಿಡವಾಗಿರುವ ಇದು ಬೇರುಗಳಿಂದ ಅಭಿವೃದ್ದಿ ಹೊಂದುವುದರಿಂದ ಕಳೆನಾಶಕಗಳನ್ನು ಸಿಂಡಿಸಿದರೂ ಮೇಲಿನ ಭಾಗ ಒಣಗಿದಂತಾಗಿ ಮತ್ತೆ ಹದ ಸಿಕ್ಕಿದ ಕೂಡಲೇ ಬೆಳೆಯುತ್ತವೆ. ಒಂದು ಗಿಡದಿಂದ ಒಂದು ವರ್ಷಕ್ಕೆ ಸುಮಾರು ಒಂದು ಲಕ್ಷ ಬೀಜ ಉತ್ಪತ್ತಿಯಾಗುತ್ತವೆ. ಬೀಜವೇ ಇಲ್ಲದೆ ಭೂಮಿಯೊಳಗೆ ಬೇರುಗಳು ಹಬ್ಬಿ ಬೆಳೆಯುತ್ತವೆ,ಗಿಡವು ತಿಳಿ ನೇರಳೆ ಬಣ್ಣದ ಆಕರ್ಷಕ ಹೂವು ಬಿಡುತ್ತದೆ,ಹೂವು ಗಿಡದ ತುದಿಯಲ್ಲಿರುತ್ತದೆ, ಸಾಮಾನ್ಯವಾಗಿ ಈ ಹೂವಿನ ವ್ಯಾಸ ೧-೨ ಸೆಂಟಿಮೀಟರ್ ಗಳಷ್ಟೆ.
ಔಷಧೀಯ ಉಪಯೋಗಗಳು :
ಈ ಗಿಡವನ್ನು (ಹೂ ರಹಿತ) ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಗಂಜಿಯಲ್ಲಿ ಹಾಕಿ ತಿಂದರೆ ಅಥವಾ ಕಷಾಯಮಾಡಿ ಕುಡಿದರೆ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಮೂಲವ್ಯಾದಿ(Piles) ಗುಣಮುಖವಾಗುತ್ತದೆ.ಮೂತ್ರ ಕೋಶದ ಕಲ್ಲು ನಿವಾರಣೆಯಲ್ಲಿ, ಮಹಿಳೆಯರ ಋತುಚಕ್ರ ಸರಾಗವಾಗಿ ಆಗುವಲ್ಲಿ, ಮೂಲವ್ಯಾಧಿ ಹಾಗೂ ಹಲ್ಲು ನೋವಿನ ನಿವಾರಣೆಯಲ್ಲಿ ಈ ಸಸ್ಯದ ಪಾತ್ರ ದೊಡ್ಡದು.ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣವಿದೆ. ಈ ಸಸ್ಯದ ಎಲೆ, ಹೂವು, ಕಾಂಡ ಹಾಗೂ ಬೇರು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಕಹಿ ಬೇವು

ಕಹಿ ಬೇವು 
ಆರೋಗ್ಯ ರಕ್ಷಣೆಯಂತೆ ಪರಿಸರ ಸಂರಕ್ಷಣೆ ಇಂದು ದೊಡ್ಡ ಸವಾಲಾಗಿ ಪರಿಣಿಮಿಸಿದೆ. ಮನುಷ್ಯನ ಪರಿಸರ ವಿರೋಧಿ ಚಂತನೆ ಇದಕ್ಕೆ ಮುಖ್ಯ ಕಾರಣ. ಈಗ ಸವಾಲು ಎದುರಿಸಲು ನಮಗಿರುವ ಏಕೈಕ ಮಾರ್ಗವೆಂದರೆ ಪರಿಸರ ಸಂಪತ್ತಿನ ರಕ್ಷಣೆ ಮಾಡುವುದು. ಪರಿಸರ ಮಾಲಿನ್ಯದ ತಡೆ ಜೊತೆಗೆ ಆರೋಗ್ಯಯುತ ಬದುಕು ಕಲ್ಪಿಸುವ ವೃಕ್ಷಗಳಲ್ಲಿ ಬೇವಿಗೆ (ಬೇವು-neem) ಮೊದಲ ಹೆಸರು.
# ಬೇವಿನ ಉಪಯೋಗ 1). ಗುಣದಿಂದ ಬೇವು ಕಲ್ಪವೃಕ್ಷ !
ಬಹು ಉಪಯೋಗಿ ಬೇವಿನ ಗುಣ ಹಾಗೂ ಉಪಯೋಗದ ಕುರಿತು ನೀವು ಅರಿತರೆ ಅಚ್ಚರಿಪಡುತ್ತೀರಿ ! ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಪಾರಮಾರ್ಥಿಕ ವಿಷಯಗಳ ಸಧಾರಣೆಯಲ್ಲಿ ಬೇವು ಆದ್ಯ ಪಾತ್ರ ವಹಿಸುತ್ತದೆ ಎಂದರೆ ನಂಬಲೇಬೇಕು. ದೈವಿಕ ಕಾರ್ಯಗಳೇ ಆಗಲಿ, ವೈದ್ಯಕೀಯ ಕಾರ್ಯಗಳೇ ಬೇವು ಮುಂದಿರುತ್ತದೆ.
ವೇದ ಸಾಹಿತ್ಯದಲ್ಲಿ ಬಹುವಾಗಿ ಉಲ್ಲೇಕಿತವಾಗಿರುವ ಬೇವಿನ ಮರದ ಪ್ರತಿ ಭಾಗಕೂಡ ಉಪಯೋಗಕಾರಿ. ಬೇವು ಪರಿಸರವನ್ನು ನಿರ್ಮಲವಾಗಿಟ್ಟು ಶುದ್ಧ ಗಾಳಿಯನ್ನು ಕಲ್ಪಿಸುತ್ತದೆ. ಬೇವು ಕಹಿಯಾದದರೂ ಉಪಯೋಗದ ಕಾರಣದಿಂದ ಕಲ್ಪವೃಕ್ಷವೇ ಸರಿ.
# ಬೇವಿನ ಉಪಯೋಗ 2). ಹಲವು ರೋಗಗಳಿಗೆ ಮದ್ದು ಬೇವು
ಯುಗಾದಿಯಿಂದ ಆರಂಭವಾಗಿ ಚೈತ್ರ ಮಾಸವಿಡೀ ಮುಂಜಾನೆ ಬೇವಿನ ಎಲೆಗಳನ್ನು ಪ್ರತದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇಡೀ ವರ್ಷ ರೋಗ ರುಜಿನಗಳು ಬರವುದಿಲ್ಲ ಎಂಬುದು ಹಿರಿಯರ ಮಾತು.
ಹಾನಿಕಾರಕ ಅಣುಜೀವಿಗಳಿಂದ ಹರಡುವ ಸೋಂಕುಗಳ ತಡೆಗೆ ಬೇವು ಉತ್ತಮ ಮದ್ದು. ಬೇವಿನ ಸೊಪ್ಪನಲ್ಲಿ ಮತ್ತು ಎಣ್ಣೆಯಲ್ಲಿ ಕ್ರಿಮಿನಾಶಕ ಗುಣವಿದೆ. ಎಳೆಯ ಬೇವಿನಕಡ್ಡಿಯನ್ನು ಕುಂಚದಂತೆ ಮಾಡಿ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆ ಬರುವುದಿಲ್ಲ.
ಕಡಿಮೆ ಮಳೆ ಬೀಳುವ ಮತ್ತು ಬಿಸಿಲಿನ ತಾಪ ಅಧಿವಾಗಿರುವ ಪ್ರದೇಶದಲ್ಲಿ ಬೇವಿನ ಮರ ಹುಲುಸಾಗಿ ಬೆಳೆಯುತ್ತವೆ. ಇದು ಪ್ರಕೃತಿ ವಿಶೇಷ. ಬೇವಿನ ಮರಗಳ ಮೇಲಿಂದ ಬೀಸುವಗಾಳಿಯು ಬಿಸಿಲಿನ ತಾಪದಿಂದ ಬಳಲಿದ ದೇಹಕ್ಕೆ ತಂಪು ನೀಡುತ್ತದೆ. ಇದು ಆರೋಗ್ಯಕರ ಕೂಡ ಹೌದು.
# ಬೇವಿನ ಉಪಯೋಗ 3). ಬೇವಿನಿಂದ ಮಲೇರಿಯಾ ದೂರ
ಬೇವಿನ ಸೊಪ್ಪು, ಬೇವಿನ ಹೂವು ,ಬೇವಿನ ಎಣ್ಣೆ, ಬೇವಿನ ತೊಗಟೆಯಲ್ಲಿ ಹಲವು ರೋಗ ನಿವಾರಕ ಅಂಶಗಳಿದ್ದು, ಇವುಗಳಿಂದ ಔಷಧ ತಯಾರಿಸಲಾಗುತ್ತದೆ. ಚರ್ಮ ರೋಗನಿವಾರಣೆಗೆ ಬೇವು ಸಿದ್ಧ ಔಷಧ. ಬೇವಿನ ತಾಜಾ ಸೊಪ್ಪನ್ನು ಹಿಂಡಿ ಸೇವಿಸಿದರೆ ಶಾರೀರಿಕ ದೋಷ ಕೂಡ ನಿವಾರಣೆ ಆಗುತ್ತವೆ ಎಂಬುದು ತಜ್ಞರ ಅನಿಸಿಕೆ .
ಬೇವಿನ ಮರದ ಬುಡದಲ್ಲಿನ ತೊಗಟೆಯನ್ನು ಕೆತ್ತಿ ತೆಗೆದು ಅದರಲ್ಲಿ ಕಷಾಯ ತಯಾರಿಸಿ ಸೇವಿಸುವುದರಿಂದ ಕುಷ್ಟ ರೋಗಾದಿ ಚರ್ಮ ರೋಗಗಳು ನಿವಾರಣೆಯಾಗುವುವು. ಮಧುಮೇಹ, ನಿಶ್ಯಕ್ತಿ, ವಾಕರಿಕೆ, ಬಾಯಾರಿಕೆ, ಗಡುಸಿನ ಜ್ವರ ಸೇರಿದಂತೆ ಅನೇಕ ದೋಷಗಳಿಗೆ ಬೇವು ರಾಮಬಾಣ.
ಮಲೇರಿಯಾ ಜ್ವರದಲ್ಲಿ 2 ಅಥವಾ 3 ಗ್ರಾಂ ಬೇವಿನ ಎಲೆಗಳ ಚೂರ್ಣವನ್ನಾಗಲೀ, ತೊಗಟೆಯ ಚೂರ್ಣವನ್ನಾಗಲಿ ಬಿಸಿ ನೀರಿನೊಂದಿಗೆ ಸೇವಿಸುವುದರಿಂದ ಆರೋಗ್ಯ ವೃಧ್ಧಿಸುತ್ತದೆ.
ಸೀಮೆಎಣ್ಣೆಯೊಂದಿಗೆ ಬೇವಿನ ಎಣ್ಣೆ ಬೆರೆಸಿ ದೀಪ ಉರಿಸುವುದರಿಂದ ಸೊಳ್ಳೆಗಳ ಕಾಟ ತಪ್ಪಿಸ ಬಹುದು. ದ್ವಿಶತಾಂಶ ಬೇವಿನ ಎಣ್ಣೆಯೊಂದಿಗೆ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ದೇಹಕ್ಕೆ ಲೇಪಿಸಿದರೆ ಸೊಳ್ಳೆಗಳು ಹತ್ತಿರಕ್ಕೆ ಬರುವುದಿಲ್ಲ.
ಬೇವಿನ ಎಲೆಗಳ ರಸವನ್ನು ಸಕ್ಕರೆಯೊಂದಿಗೆ ಸೇವಿಸುವುದರಿಂದ ಆಮಾತಿಸಾರ (dysentery) ಮತ್ತು ಅತಿಸಾರ (diarrhoea) ದಿಂದ ಗುಣಮುಖವಾಗಬಹುದು. ಪ್ರತಿದಿನ ಬೆಳಗ್ಗೆ 10-12 ಬೇವಿನ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಚನ್ನಾಗಿ ಅಗೆದು ಒಂದು ಬಟ್ಟಲು ನೀರು ಕುಡಿದರೆ ಕ್ಯಾನ್ಸರ್ ಸಂಬಂಧಿ ರೋಗಗಳು ದೂರವಾಗುತ್ತವೆ ಎಂಬುದು ಹಿರಿಯರ ಅಭಿಪ್ರಾಯ
# ಬೇವಿನ ಉಪಯೋಗ 4). ಕಹಿ ಬೇವು ಗುಣದಲ್ಲಿ ಅಮೃತ !
ಒಟ್ಟಾರೆ ಬೇವು ಗುಣದಲ್ಲಿ ಕಹಿ ಎನಿಸಿದರೂ ಅದರ ಉಪಯೋಗದಲ್ಲಿ ಮಾತ್ರ ಅಮೃತ. ಬೇವು ಅಂದಕೂಡಲೇ ನಾವು ಮುಖ ಸಿಂಡರಸಿಕೊಳ್ಳುತ್ತೆವೆ. ಆದರೆ ಬೇವಿನ ಉಪಯೋಗ ಅರಿತು ಅದನ್ನು ನಿಯಮಿತವಾಗಿ ಬಳಕೆ ಮಾಡಿದರೆ ಆರೋಗ್ಯಯುತ ಜೀವನ ನಡೆಸಬಹುದು ಎಂಬುದು ನಮ್ಮ ಪೂರ್ವಜರ ಸಲಹೆ.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಬುದ್ದೆ / ಬಡ್ಡೆ / ದೊಡ್ಡ ಬಡ್ಡೆ ಹಣ್ಣು



ಬುದ್ದೆ / ಬಡ್ಡೆ / ದೊಡ್ಡ ಬಡ್ಡೆ ಹಣ್ಣು
ನೋಡಲು ದೀಪಾವಳಿ ಹಬ್ಬದ ಆಕಾಶಬುಟ್ಟಿಯಂತೆ ಅಥವಾ ಲಾಟೀನುಗಳಂತೆ ಕಾಣುವ ಹಣ್ಣುಗಳನ್ನು ಬಿಡುವ ಈ ಸಸ್ಯ Physalis alkenkengi. Solanaceae ಕುಟುಂಬದ ಇದರ ಸಾಮಾನ್ಯ ಹೆಸರೇ Chinese Lantern plant. ಬಹುಶಃ ಕನ್ನಡದಲ್ಲಿ " ಬುದ್ದೆ / ಬಡ್ಡೆ / ದೊಡ್ಡ ಬಡ್ಡೆ ಹಣ್ಣು " ಎಂದು ಕರೆಯುತ್ತಾರೆ. Cape Gooseberry ಎಂದೂ ಹೆಸರಿದೆ.
ಹುಳಿ ಮಿಶ್ರಿತ ಸಿಹಿ ಹಣ್ಣುಗಳು ನಮ್ಮ ಟೊಮ್ಯಾಟೋ ಹಣ್ಣುಗಳ ರುಚಿಯಂತೆಯೇ ಇರುತ್ತವೆ. ಅಧಿಕವಾದ ವಿಟಮಿನ್ - A ಮತ್ತು C ಇದೆ.
ಕಾಯಿಗಳಲ್ಲಿ Solanine ಎಂಬ ಅಂಶ ಇರುವುದರಿಂದ, ಕಾಯಿಗಳ ಸೇವನೆ ಸ್ವಲ್ಪ ವಿಷಕಾರಿ. ಆದರೆ ಹಣ್ಣುಗಳನ್ನು ಧಾರಾಳವಾಗಿ ಉಪಯೋಗಿಸಬಹುದು. ಮೂಲ ಬ್ರೆಝಿಲ್ ದೇಶದ ಈ ಹಣ್ಣುಗಳಿಂದ ಆ ದೇಶದಲ್ಲಿ Jam ತಯಾರಿಸುತ್ತಾರೆ.
ವಿಷಮ ಶೀತ ಜ್ವರ, ಮಲೇರಿಯಾ, ಗಂಟುಗಳ ಊತ, ಒಣ ಕೆಮ್ಮು, ದಮ್ಮು ಮುಂತಾದ ತೊಂದರೆಗಳಿಗೆ ಹಣ್ಣುಗಳು ಪ್ರಯೋಜನಕಾರಿ. ಕೇರಳ ರಾಜ್ಯದಲ್ಲಿ ಈ ಗಿಡದ ಎಲೆಗಳ ರಸವನ್ನು ಕಾಮಾಲೆ ( Jaundice ) ನಿವಾರಣೆಗಾಗಿ ಕುಡಿಸುವುದನ್ನು ನೋಡಿದ್ದೇನೆ.
ಚೀನಾ ಮತ್ತು ಜಪಾನ್ ದೇಶದಲ್ಲಿ ಹೆರಿಗೆ ನಿದಾನವಾದಲ್ಲಿ ಈ ಗಿಡದಿಂದ ತಯಾರಿಸಿದ ಒಂದು ಕಷಾಯವನ್ನು ಅಲ್ಲಿಯ ನಾಟಿ ಅಜ್ಜಿಯರು ಕುಡಿಸುತ್ತಾರೆ. ಇದರಿಂದ ಹೆರಿಗೆ ಸುಸೂತ್ರವಾಗಿ ಆಗಿರುವುದನ್ನು ಸಹಾ ಕಂಡಿದ್ದೇನೆ.
ರಕ್ತಹೀನತೆಗೆ ( anemic ) ಒಳ್ಳೆಯದು.

ಕೃಪೆ: ಸಸ್ಯ ಕಣಜ 

ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಪಲಾವ್ ಎಲೆ, ಬಾಸುಮತಿ ಎಲೆ


ಪಲಾವ್ ಎಲೆ, ಬಾಸುಮತಿ ಎಲೆ

ಪಲಾವ್ ಎಲೆ, ಬಾಸುಮತಿ ಎಲೆ ಎಂದೆಲ್ಲ ಕರೆಯುವ ಈ ಎಲೆಗಳು ಆಹಾರಕ್ಕೆ ವಿಶೇಷ ಪರಿಮಳವನ್ನು ಕೊಡುತ್ತದೆ.ಇದನ್ನು ಸಸ್ಯಹಾರ ಮಾಂಸಹಾರ ಮತ್ತು ಸಿಹಿತಿಂಡಿಗಳಲ್ಲಿ ಬಳಸುತ್ತಾರೆ
ಪಾಂಡನಸ್ ಅಮರಿಲ್ಲಿಫೋಲಿಸ್ (Pandanus amaryllifolius) ಇದರ ಸಸ್ಯ ಶಾಸ್ತ್ರೀಯ ಹೆಸರು.ಕೇದಿಗೆ, ತಾಳೆ ಗಿಡಗಳ ಪಾಂಡನೇಸಿ ಕುಟುಂಬಕ್ಕೆ ಸೇರಿರುವ ಈ ಗಿಡವು ಥೈಲ್ಯಾಂಡ್ ಶ್ರೀಲಂಕ ನ್ಯೂಗಿನಿ ಇಂಡೋನೆಷಿಯಾ ವಿಯೆಟ್ನಾಮ್ ದಕ್ಷಿಣ ಭಾರತ ಮುಂತಾದ ಮಳೆಕಾಡಿರುವ ದೇಶಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ.ಎಲೆಗಳನ್ನು ಕತ್ತರಿಸುತ್ತಿದ್ದರೆ ಪುಟ್ಟದಾಗಿಯೇ ಇರುವ ಇದು ಆಳೆತ್ತರಕ್ಕೆ ಬೆಳೆಯುವ ಗಿಡ.ಹಿತ್ತಲಿನಲ್ಲಿ ಪಾಟ್ ನಲ್ಲಿಯೂ ಇದನ್ನು ಬೆಳೆಯಬಹುದು.ಅಡಿಟಾಲ್ ಪೈರೊಲಿನ್ ಎಂಬ ರಾಸಾಯನಿಕವು ಈ ವಿಶೇಷವಾದ ಪರಿಮಳಕ್ಕೆ ಕಾರಣವಾಗಿದೆ.ತಾಳೆ,ಕೇದಿಗೆ ಗಿಡಗಳಲ್ಲಿ ಈ ಸುವಾಸನೆಯು ಹೂವು ಹಣ್ಣುಗಳಲ್ಲಿರುವುದು.ಈ ಗಿಡ ಹೂವು ಬಿಡದ ಕಾರಣ ಇದರ ಎಲೆಗಳು ಈ ಗುಣವನ್ನು ಪಡೆದಿವೆ.ಬಾಸುಮತಿಯಲ್ಲಿಯೂ ಈ ಗುಣಗಳಿರುವುದರಿಂದ ಇದನ್ನು ಬಾಸುಮತಿ ಎಲೆ ಎಂದು ಕರೆಯುವರು.ಆದರೆ ಬಾಸುಮತಿಯ ಸುವಾಸನೆಗಿಂತಲೂ ಹತ್ತುಪಟ್ಟು ಹೆಚ್ಚು ಸುವಾಸನೆಯನ್ನು ಈ ಎಲೆಗಳು ಹೊಂದಿರುವುದರಿಂದ ಸಾಧಾರಣ ಅಕ್ಕಿಯಿಂದ ಮಾಡಿದ ಆಹಾರಗಳಿಗೂ ಇದು ವಿಶೇಷ ಪರಿಮಳ ಕೊಡಲು ಸಾಧ್ಯವಾಗಿದೆ.
ಜೊತೆಗೆ ಈ ಎಲೆಗಳಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣದಿಂದಾಗಿ ಹಲವು ಕಾಯಿಲೆಗಳನ್ನು ಹತೋಟಿಯಲ್ಲಿಡಬಹುದು ದೇಹದೊಳಗಿನ ಮುಕ್ತ ಅಣುಗಳನ್ನು ಹೊರ ಹಾಕುವದರ ಜೊತೆಗೆ ಸೂಪರ್ ಆಕ್ಸೈಡ್ ಆನಯಾನ್ ಮತ್ತುಕಬ್ಬಿಣದ ಮುಕ್ತ ಅಣುಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ..ಇದರ ಎಲೆಗಳ ಕಷಾಯ ಸೇವಿಸುವುದರಿಂದ ರಕ್ತದೊತ್ತಡ ಸಕ್ಕರೆ ಕಾಯಿಲೆ ಯೂರಿಕ್ ಆಸಿಡ್ ಕಿಡ್ನಿ ಸ್ಟೋನ್ ಕ್ಯಾನ್ಸರ್ ಕಾಯಿಲೆಗಳನ್ನು ತಡೆಗಟ್ಟಬಹುದೆಂದು ಸಾಬೀತಾಗಿದೆ.
ಊಟ ಮಾಡಿದ ಸ್ವಲ್ಪ ಹೊತ್ತಿಗೆ ನಾಲಿಗೆ ಗಂಟಲಿನಲ್ಲಾಗುವ ಹುಣ್ಣುಗಳು, ತುಟಿ ಕೆಂಪಾಗಿ ಉರಿಯುವುದು, ಎದೆ ಉರಿ ಇವೆಲ್ಲ ಕೆಲವೊಮ್ಮೆ ಆಕ್ಸಿಡೆಂಟ್ ಗಳ ಪ್ರಭಾವದಿಂದಾಗುತ್ತವೆ.ಆಗ ಇದರ ಎಲೆಯ ಅಥವಾ ಬೇರಿನ ಕಷಾಯ ಕುಡಿಯುವುದರಿಂದ ಉಪಶಮನ ಸಾಧ್ಯ.ರಾತ್ರಿ ಮಲಗುವಾಗ ಹಾಲಿನಲ್ಲಿ ಕುದಿಸಿ ಶೋದಿಸಿ ಸಕ್ಕರೆ ಹಾಕಿ ಕುಡಿಯುವುದರಿಂದ ನಿದ್ರೆ ಚೆನ್ನಾಗಿ ಬರುವುದು.ಇದರ ರಸ ಲೇಪನ ದಿಂದ ಚರ್ಮಕ್ಕೆ ಹೆಚ್ಚಿನ ಹೊಳಪು ಸಿಗುವುದು.ಕೂದಲಿನ ಆರೈಕೆಯಲ್ಲೂ ಇದರ ರಸ ಬಳಸುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಗಟ್ಟಿ ತಲೆಹೊಟ್ಟನ್ನು ನಿವಾರಿಸಿ ಕೂದಲ ಬೆಳವಣಿಗೆಗೆ ಸಹಕಾರಿಯಾಗುವುದು.ಮೈಕೈ ನೋವಿಗೆ ಇದರ ಎಲೆಯ ರಸದಿಂದ ಮಾಡಿದ ಎಣ್ಣೆ ರಾಮಬಾಣ.
ಗಿಡದಿಂದ ಕೊಯ್ದ ಎಲೆಗಳ ಬುಡಕ್ಕೆ ನೀರು ಹಾಕಿ ಬಕೇಟ್ ನಲಿಟ್ಟರೆ ಅಥವಾ ನೀರು ಚಿಮುಕಿಸುತ್ತಿದ್ದರೆ 3-4ದಿನಗಳ ಕಾಲ ತಾಜತನದಿಂದಿರುತ್ತವೆ.
ಇದನ್ನು ಕಂದುಗಳ ಮೂಲಕ ನೆಡಬಹುದು.ಬೇರುಗಳ ಮೂಲಕ ಹೊಸ ಗಿಡಗಳು ಹುಟ್ಟುತ್ತವೆ.ನೀರು ಚೆನ್ನಾಗಿರುವ ಜಾಗದಲ್ಲಿ ವರ್ಷಪೂರ್ತಿ ಹಸಿರಾಗಿರುತ್ತವೆ. ಮಳೆಗಾಲದಲ್ಲಿ ಕಂದು ಮುರಿದರೆ ಗಿಡ ಸಾಯುವ ಸಾಧ್ಯತೆ ಹೆಚ್ಚು.ಮುರಿದ ಬಾಗಕ್ಕೆ ಶಿಲೀಂಧ್ರ ನಾಶಕ ಹಚ್ಚಬೇಕು.
ಈ ಗಿಡದ ಎಲೆಗಳ ಬಳಕೆಯಿಂದ ಇಲ್ಲಿಯವರೆಗೆ ಯಾವುದೇ ಅಡ್ಡ ಪರಿಣಾಮಗಳು ಬೆಳಕಿಗೆ ಬಂದಿಲ್ಲ.


ಕೃಪೆ : ಸಸ್ಯ ಕಣಜ 


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಉತ್ತರಣೆ ಗಿಡ


ಉತ್ತರಣೆ ಗಿಡ
ಉತ್ತರಣೆ ಗಿಡವನ್ನು ನಾವು ಹಲವು ಕಡೆಗಳಲ್ಲಿ ಕಂಡಿರುತ್ತೇವೆ ಇದು ನಾವು ದಾರಿಯಲ್ಲಿ. ಪೊದೆಗಳಲ್ಲಿ ಬೆಳೆಯುತ್ತದೆ. ಎಲ್ಲೆಂದರಲ್ಲಿ ಹದವಾಗಿ , ಸೊಂಪಾಗಿಬೆಳೆಯುವ ಈ ಉತ್ತರಣೆ ಗಿಡ ಹಲವು ರೋಗಗಳನ್ನು, ಸಮಸ್ಯೆಗಳನ್ನು ನಿವಾರಿಸುತ್ತದೆಯಂತೆ.
*ಜಾಂಡೀಸ್ ನಿವಾರಣೆಗೆ : 10 ಗ್ರಾಂ ಉತ್ತರಣೆ ಬೀಜಗಳನ್ನು ರಾತ್ರಿ ನೆನೆಹಾಕಿ ಬೆಳೆಗ್ಗೆ ಚೆನ್ನಾಗಿ ರುಬ್ಬಿ, ಮಜ್ಜಿಗೆಯೊಂದಿಗೆ ಸೇವಿಸಬೇಕು. (ಒಂದು ವಾರ) ಪಥ್ಯ: ತಿಳಿಸಾರು, ಅನ್ನ, ಎಣ್ಣೆ ಸೇವಿಸಕೂಡದು.
*ಸರ್ಪ ವಿಷ ನಿವಾರಣೆಗೆ: ಉತ್ತರಣೆಯ ಬೇರು, ಕರಿಮೆಣಸು, ಎರಡನ್ನು ಸಮ ಪ್ರಮಾಣದಲ್ಲಿ ಚೂರ್ಣಿಸಿಕೊಂಡು, ಒಂದು ಚಮಚದಷ್ಟು ನುಣ್ಣನೆಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಕುಡಿಸಬೇಕು. ವಿಷವು ನಿವಾರಣೆಯಾಗುವವರೆಗೂ ಆಗಾಗ ಕುಡಿಸುತ್ತಿರಬೇಕು.
*ಬಂಜೆತನದಲ್ಲಿ: ಉತ್ತರಾಣಿ ಗಿಡದ ಹೂಗೊಂಚಲುಗಳನ್ನು ತಂದು ಎಮ್ಮೆ ಹಾಲಿನಲ್ಲಿ ನಯವಾಗಿ ಅರೆದು ಬಟ್ಟೆಯಲ್ಲಿ ಶೋಧಿಸುವುದು. ದಿವಸಕ್ಕೆ 10 ಗ್ರಾಂನಷ್ಟು ಹಾಲನ್ನು ಮುಟ್ಟಾಗಿರುವಾಗ ಐದು ದಿವಸ ಸೇವಿಸುವುದು. ಹಾಲು ಅನ್ನ ಪಥ್ಯ, ಶಾಂತಚಿತ್ತರಾಗಿರುವುದು. ಹೀಗೆ ಕ್ರಮವಾಗಿ ಮೂರು ಮುಟ್ಟಿನಲ್ಲಿ ಮಾಡಬೇಕು.
*ಇಸಬಿಗೆ : ಕೆಂಪು ಉತ್ತರಾಣಿ ಗಿಡವನ್ನು ಬೇರು ಸಹಿತ ತಂದು, ಸುಟ್ಟು ಬೂದಿ ಮಾಡುವುದು. 20 ಗ್ರಾಂ ಈ ಬೂದಿಗೆ 5 ಗ್ರಾಂ ವೀಳೆದೆಲೆಗೆ ಹಾಕುವ ಸುಣ್ಣ ಮತ್ತು 5 ಗ್ರಾಂ ಅರಿಶಿಣದ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಶೋಧಿಸಿದ ಗೋಮೂತ್ರದಲ್ಲಿ ಅರೆದು ಹಚ್ಚುವುದು.
*ಪೆಟ್ಟು ತಾಗಿ, ರಕ್ತ ಸೋರುತ್ತಿದ್ದರೆ: ಕೆಂಪು ಉತ್ತರಾಣಿ ಗಿಡದ ಸೊಪ್ಪಿನ ರಸವನ್ನು ಗಾಯದ ಮೇಲೆ ಹಿಂಡುವುದು. ತಕ್ಷಣ ರಕ್ತಸ್ರಾವ ನಿಲ್ಲುವುದು ಮತ್ತು ಗಾಯವು ಕ್ರಮೇಣ ವಾಸಿಯಾಗುವುದು.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಸಂಪಿಗೆ


ಸಂಪಿಗೆ
ಸುವಾಸಿತ ಸಂಪಿಗೆ ಹೂವನ್ನು ದೇವರಿಗೆ ಹಾಗೂ ಹೆಣ್ಣು ಮಕ್ಕಳು ತಲೆಗೆ ಮುಡಿಯಲು ಬಳಸುತ್ತಾರೆ. ಇದರಲ್ಲಿ 2 ಬಗೆ ಕೆಂಡ ಸಂಪಿಗೆ ಮತ್ತು ಬಿಳಿ ಸಂಪಿಗೆ. ಸಂಪಿಗೆ ಹೂವು ಮತ್ತು ಮರದ ಚಕ್ಕೆ ಔಷಧೀಯ ಗುಣಗಳನ್ನು ಹೊಂದಿದೆ.
-ಸಂಪಿಗೆ ಮರದ ಚಕ್ಕೆಯ ಕಷಾಯವನ್ನು ಮಾಡಿ ಅದಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.
-ಸಂಪಿಗೆಯ ಹೂಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಮುಚ್ಚಿಡಬೇಕು. ಅದು ತಣ್ಣಗಾದ ನಂತರ ನೀರನ್ನು ಸೇವಿಸಿದರೆ ಹೊಟ್ಟೆ ಉರಿ ಕಡಿಮೆಯಾಗುತ್ತದೆ.
-ಸಂಪಿಗೆ ಮರದ ಎಲೆಗಳ ರಸವನ್ನು ಜೇನುತುಪ್ಪದ ಜೊತೆ ಸೇವಿಸಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.
-ಸಂಪಿಗೆ ಹೂವಿನಿಂದ ತಯಾರಿಸಿದ ಎಣ್ಣೆಯನ್ನು ತಲೆ ನೋವು ಮತ್ತು ದೇಹದಲ್ಲಾಗುವ ಗಂಟುಗಳ ನೋವಿಗೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.
-ಹೆಣ್ಣು ಮಕ್ಕಳ ಮುಟ್ಟಿನ ಸಮಯದ ಕಡಿಮೆ ರಕ್ತಸ್ರಾವ ಆಗುತ್ತಿದ್ದರೆ ಸಂಪಿಗೆ ಮರದ ಚಕ್ಕೆಯ ರಸಕ್ಕೆ ಜೀರಿಗೆ ಪುಡಿ ಮತ್ತು ಸಕ್ಕರೆ ಸೇರಿಸಿ ಸೇವಿಸಿದರೆ ರಕ್ತಸ್ರಾವ ಸರಿಯಾದ ಪ್ರಮಾಣದಲ್ಲಿ ಆಗುತ್ತದೆ.
-ಸಂಪಿಗೆಯ ಹೂಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಮುಚ್ಚಿಡಬೇಕು. ಅದು ಆರಿದ ನಂತರ ಸೇವಿಸಿದರೆ ಕಟ್ಟಿಕೊಂಡಿರುವ ಮೂತ್ರ ಸಲೀಸಾಗಿ ಹೋಗುತ್ತದೆ.
-ದೇಹದ ಯಾವುದಾದರು ಭಾಗದಲ್ಲಿ ದೊಡ್ಡ ಗಾಯವಾಗಿದ್ದರೆ ಸಂಪಿಗೆ ಮರದ ಚಕ್ಕೆಯ ಕಷಾಯದಿಂದ ಗಾಯವನ್ನು ತೊಳೆದರೆ ಗಾಯ ಬೇಗ ವಾಸಿಯಾಗುತ್ತದೆ.
-ಪ್ರತಿ ದಿನ ಸಂಪಿಗೆ ಮರದ ಎಲೆಗಳನ್ನು ಬಿಸಿ ನೀರಲ್ಲಿ ಹಾಕಿ ಆ ನೀರಲ್ಲಿ ಕಾಲಿಟ್ಟುಕೊಳ್ಳಬೇಕು. ನಂತರ ಸಂಪಿಗೆಯ ಮೊಗ್ಗು ಮತ್ತು ಬೀಜವನ್ನು ಅರೆದು ಹಿಮ್ಮಡಿಗೆ ಲೇಪಮಾಡುತ್ತಿದ್ದರೆ ಹಿಮ್ಮಡಿ ಒಡೆಯುವುದು ಕಡಿಮೆಯಾಗುತ್ತದೆ.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಕುಪ್ಪಿ ಗಿಡ


ಕುಪ್ಪಿ ಗಿಡ

ವಾತನೋವು ಸೆಳೆತಕ್ಕೆ :-

ಹಸೀ ಕುಪ್ಪಿ ಎಲೆಗಳನ್ನು ಜಜ್ಜಿ, ಎಳ್ಳೆಣ್ಣೆಯಲ್ಲಿ ಬೆರೆಸಿ, ತೈಲ ಉಳಿಯುವಂತೆ ಕಾಯಿಸಿ, ಶೋಧಿಸಿಟ್ಟುಕೊಳ್ಳುವುದು. ಬೇಕಾದರೆ ಸುಗಂಧ ವಸ್ತುಗಳ ಚೂರ್ಣವನ್ನು ಸೇರಿಸಿಕೊಳ್ಳಬಹುದು. ನೋವಿರುವ ಕಡೆಗೆ ಹಚ್ಚುವುದು.

ಮಲಬದ್ಧತೆಗೆ :-

ಮಕ್ಕಳು ಮಲಬದ್ಧತೆಯಾಗಿ ಅಳುತ್ತಿದ್ದರೆ ಹಸೀ ಎಲೆಗಳನ್ನು ತಂದು ಚೆನ್ನಾಗಿ ತೊಳೆದು ಜಜ್ಜಿ ಸ್ವಲ್ಪ ಭಾಗವನ್ನು ಮಲದ್ವಾರದಲ್ಲಿ ಸೇರಿಸುವುದು.

ಮಕ್ಕಳ ಶೀತ ವ್ಯಾಧಿಗೆ :-

ಹಸೀ ಎಲೆಗಳ ರಸವನ್ನು ಸ್ವಲ್ಪ ಜೇನು ಸೇರಿಸಿ ನೆಕ್ಕುವುದು. ಮೊದಲು ಸ್ವಲ್ಪ ವಾಂತಿಯಾಗಿ, ನಂತರ ವಾಸಿಯಾಗುವುದು. ಈ ರಸ ಸೇವಿಸುವುದರಿಂದ ದೊಡ್ಡವರಲ್ಲಿ ಕೆಮ್ಮು, ಕಫ, ದಮ್ಮು ಗುಣವಾಗುವುದು.

ಮಕ್ಕಳ ಹೊಟ್ಟೆನೋವಿಗೆ :-

ಬೆಳ್ಳುಳ್ಳಿ ಮೆಣಸು ಇವುಗಳ ಸಮತೂಕದ ಎರಡು ಭಾಗ ಕುಪ್ಪಿ ಸೊಪ್ಪನ್ನು ಸೇರಿಸಿ, ನುಣ್ಣಗೆ ಅರೆದು, ಸ್ವಲ್ಪ ಭಾಗವನ್ನು ಹಾಲಿನಲ್ಲಿ ಕದಡಿ ಕುಡಿಸುವುದು.

ಪೀನಾಸಿ ರೋಗಕ್ಕೆ(ಮೂಗಿಗೆ ವಾಸನೆ ತಿಳಿಯದಿರುವುದು) :-

ಒಂದು ಬೆಳ್ಳುಳ್ಳಿ ಹಿಲಕು, ಒಂದು ಮೆಣಸಿನಕಾಳು ಮತ್ತು ನಾಲ್ಕೈದು ಕುಪ್ಪಿ ಎಲೆಗಳನ್ನು ಸೇರಿಸಿ, ನುಣ್ಣಗೆ ಅರೆದು ಬಟ್ಟೆಯಲ್ಲಿ ಶೋಧಿಸಿ ಮೂಗಿನ ಎರಡೂ ಹೊಳ್ಳೆಗಳಿಗೆ ನಾಲ್ಕೈದು ತೊಟ್ಟು ಬಿಡುವುದು.

ತುರಿಕೆ, ಕಜ್ಜಿಗೆ :-

ಹಸೀ ಎಲೆಗಳನ್ನು ತಂದು, ಸ್ವಲ್ಪ ಅಡಿಗೆ ಉಪ್ಪು ಸೇರಿಸಿ ನುಣ್ಣಗೆ ಕಲ್ಪತ್ತಿನಲ್ಲಿ ಅರೆದು ಪಟ್ಟು ಹಾಕುವುದು. ಸಿಪಲಿಸ್ ಎನ್ನುವ ಮರ್ಮಾಂಗ ಹುಣ್ಣಿಗೆ ಸಹ ಇದೇ ರೀತಿ ಚಿಕಿತ್ಸೆ ಮಾಡುವುದು.

ಮೂರ್ಛೆಗೆ :-

ಹಸೀ ಕುಪ್ಪಿ ಎಲೆಗಳ ರಸವನ್ನು ಮೂಗಿನ ಎರಡೂ ಹೊಳ್ಳೆಗಳಿಗೆ ತೊಟ್ಟು ತೊಟ್ಟಾಗಿ ಬಿಡುವುದು.ಬಹು ಬೇಗ ಪ್ರಜ್ಞೆ ಬಂದು ಎಚ್ಚರವಾಗುವುದು. ಒಂದೆರಡು ಬಾರಿ ತಣ್ಣೀರನ್ನು ಮುಖಕ್ಕೆ ತುಂತುರು ರೂಪದಂತೆ ಚಿಮುಕಿಸುವುದು. ಕಿವಿ ನೋವಿನಲ್ಲಿ ಎಲೆಗಳ ರಸವನ್ನು ನೋವಿರುವ ಕವಿಗಳಿಗೆ ತೊಟ್ಟು ತೊಟ್ಟಾಗಿ ಬಿಡುವುದು. ಸ್ವಲ್ಪ ಬಿಸಿ ಮಾಡಿ ಹಾಕುವುದು.


ಕೃಪೆ : ಸಸ್ಯ ಕಣಜ 


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ನುಗ್ಗೆ ಮರ


ನುಗ್ಗೆ ಮರ
ನುಗ್ಗೆಯಲ್ಲಿ ಬಿಸುಡಲು ಏನಿಲ್ಲ. ಅದರ ಕಾಯಿ ಮಾತ್ರವಲ್ಲ; ಎಲೆ, ಬೇರು, ಹೂ, ತೊಗಟೆ ಎಲ್ಲವೂ ಬಳಕೆಯ ದೃಷ್ಟಿಯಿಂದ ಮಹತ್ವ ಪಡೆದಿವೆ. ಇದರ ಮರವನ್ನು ಕೆತ್ತಿದಾಗ ಒಸರುವ ಅಂಟನ್ನು ಹಾಲಿನಲ್ಲಿ ಬೆರೆಸಿ ಲೇಪಿಸಿದರೆ ತಲೆಶೂಲೆ ಶೀಘ್ರ ಶಮನವಾಗುತ್ತದೆ ಎಂದಿದೆ ವೈದ್ಯಗ್ರಂಥ.
ನುಗ್ಗೆಕಾಯಿ ರಕ್ತವರ್ಧಕ. ಯಕೃತ್ ಮತ್ತು ಗುಲ್ಮ ವ್ಯಾಧಿಗಳಿಗೆ ರಾಮಬಾಣ ಎನ್ನುತ್ತಾನೆ ಚಕ್ರದತ್ತ. ಹಲ್ಲು ಮತ್ತು ವಸಡಿನ ರಕ್ಷಣೆಗೆ ಬೇಕಾದ `ಸಿ' ಜೀವಸತ್ವ ನಿಂಬೆ, ನೆಲ್ಲಿಕಾಯಿಯಲ್ಲಿ ಇರುವಷ್ಟೇ ಪ್ರಮಾಣದಲ್ಲಿ ನುಗ್ಗೆಕಾಯಿಯಲ್ಲಿ ಇದೆ.
ದವಡೆಯಿಂದ ರಕ್ತ ಸೋರುವ ಪಯೋರಿಯಾ ವ್ಯಾಧಿಗೆ ಅದು ಒಳ್ಳೆಯ ಮದ್ದು. ಶೀತ, ಕೆಮ್ಮು, ಕುಷ್ಠ, ಕ್ಷಯ, ಶೂಲ ರೋಗಗಳ ನಿವಾರಣೆಗೆ ಅದು ಮದ್ದಾಗಬಲ್ಲದು. ಕಬ್ಬಿಣ, ಶರ್ಕರ, ರಂಜಕ, ಪಿಷ್ಟ, ಸುಣ್ಣ, ಕೊಬ್ಬು, ನಾರು, ಫಾಸ್ಫರಸ್, ಅಲ್ಪ ಪ್ರಮಾಣದ `ಬಿ' ಅನ್ನಾಂಗ ಇರುವ ನುಗ್ಗೆ ಹಸಿವನ್ನು ವರ್ಧಿಸುತ್ತದೆ. ಸಂಧಿವಾತ, ಹೃದ್ರೋಗ, ರಕ್ತದ ಒತ್ತಡಗಳಿಗೂ ಮದ್ದಾಗುತ್ತದೆ.
ಉನ್ಮಾದ, ಗಂಡಮಾಲೆ ಚಿಕಿತ್ಸೆಗೆ ನುಗ್ಗೆಯ ಬೀಜ ಸಹಕಾರಿ. ಹುರಿದು ತಿನ್ನಲು ಸ್ವಾದಿಷ್ಟ. ಜ್ವರ, ಜಂತುಹುಳ, ಕಫ ನಿವಾರಕ. ನುಗ್ಗೆ ಬೀಜದಿಂದ ತೆಗೆದ ತೈಲ ಯಾವ ಚಳಿಗೂ ಗಟ್ಟಿಯಾಗದ ಕಾರಣ ಗಡಿಯಾರದ ಕೀಲೆಣ್ಣೆಗೆ ಉಪಯೋಗ ಆಗುತ್ತಿತ್ತು. ಬೀಜ ಮತ್ತು ಹೂಗಳ ತೈಲವು ಸಂಧಿವಾತ ನಿವಾರಕ. ಸೌಂದರ್ಯ ವೃದ್ಧಿಗೆ ಸಹಾಯಕ. ಸುಗಂಧಿತ ಹೂಗಳು ಎಣ್ಣೆಯಲ್ಲಿ ಹುರಿದು ತಿನ್ನಲು ರುಚಿಕರ. ಮೂತ್ರವರ್ಧಕ. ಹಾಲಿನೊಂದಿಗೆ ಬೇಯಿಸಿ ತಿಂದರೆ ವೀರ್ಯವರ್ಧಕ. ಬಂಜೆತನ ನಿವಾರಣೆ ಮಾಡುತ್ತದೆ. ಹೃದಯ ಚಿಕಿತ್ಸೆಗೆ ಬಳಸುವ ಬೆಂಜಾಲಮಿನ್, ಸ್ಟೆರೊಕಿನ್, ಮಾರಿಂಗಿನ್ ಎಂಬ ಕ್ಷಾರಗಳು ಹೂ, ಬೇರು, ತೊಗಟೆಗಳಿಂದ ದೊರಕುತ್ತವೆ.
ನುಗ್ಗೆಯ ಎಲೆಗಳಲ್ಲಿ ಪ್ರೊಟೀನ್, ಕೊಬ್ಬು, ಖನಿಜ, ಸುಣ್ಣ, ಫಾಸ್ಫರಸ್, `ಬಿ' ಅನ್ನಾಂಗಗಳಿವೆ. ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆ, ಹೊಟ್ಟೆಯ ಕ್ರಿಮಿ, ನರ ದೌರ್ಬಲ್ಯ, ಅಶಕ್ತಿ ಪರಿಹರಿಸುತ್ತದೆ. ಮಕ್ಕಳ ಇರುಳುಗಣ್ಣು ತಡೆಗೆ ಉತ್ತಮ ಆಹಾರ. ಉಪ್ಪು, ನಿಂಬೆ ರಸ, ಕರಿಮೆಣಸಿನ ಪುಡಿಯೊಡನೆ ಬೇಯಿಸಿ ತಿಂದರೆ ಉಬ್ಬಸಕ್ಕೆ ಮದ್ದು. ಕ್ಷಯ ರೋಗವೂ ಶಮನ. ಹಸಿ ಎಲೆಗಳ ರಸ ಮತ್ತು ಹಾಲಿನ ಮಿಶ್ರಣ ಮಕ್ಕಳಿಗೆ, ಗರ್ಭಿಣಿಯರಿಗೆ ಪೌಷ್ಟಿಕ. ಎದೆಹಾಲು ಹೆಚ್ಚುತ್ತದೆ.
ಎಕ್ಕ- ನುಗ್ಗೆಯ ಎಲೆಗಳನ್ನು ಅರೆದು ಮೂಲವ್ಯಾಧಿಯ ಮೊಳಕೆಗಳಿಗೆ ಹಚ್ಚಿದರೆ ತುರಿಕೆ, ನೋವು ಪರಿಹಾರ. ಎಳ್ಳೆಣ್ಣೆಯೊಂದಿಗೆ ಎಲೆಗಳ ರಸದಿಂದ ತಯಾರಿಸಿದ ತೈಲ ಜಜ್ಜಿದ ಗಾಯಗಳಿಗೆ ಮದ್ದು. ಮೂಗಿಗೆ ಸೇದಿದರೆ ನೆಗಡಿ ನಿವಾರಕ. ತೆಂಗಿನೆಣ್ಣೆಯಿಂದ ಮಾಡಿದ ತೈಲ ಕೇಶವರ್ಧಕ.
ನುಗ್ಗೆ - ದೇವದಾರು ಮರದ ತೊಗಟೆಗಳನ್ನು ಮಜ್ಜಿಗೆಯಲ್ಲಿ ಅರೆದು ಹಚ್ಚಿದರೆ ಗಂಡಮಾಲೆ ರೋಗಕ್ಕೆ ಸಿದ್ಧೌಷಧ. ವಾಯುವಿಡಂಗ ಮತ್ತು ನುಗ್ಗೆಯ ಹಸಿ ತೊಗಟೆಯಿಂದ ತಯಾರಿಸಿದ ಕಷಾಯಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ಜಂತು ಹುಳಗಳು ಸಾಯುತ್ತವೆ.
ಮಧುಮೇಹ ರೋಗಿಗಳಿಗೆ ಗುಪ್ತಾಂಗದಲ್ಲಿ ನವೆಯಿದ್ದರೆ ನುಗ್ಗೆಯ ಹಸಿ ತೊಗಟೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ತೇದು ಲೇಪಿಸಬಹುದು. ಇದರ ಬೇರಿನ ಗಂಧ ಲೇಪನವು ಶಕ್ತಿ ಪ್ರಚೋದಕ ಸಹ. ಸಾಸಿವೆಯೊಂದಿಗೆ ನುಗ್ಗೆ ಬೇರನ್ನು ಸೇರಿಸಿ ಮಾಡಿದ ಕಷಾಯ ದಿನ ಬಿಟ್ಟು ದಿನ ಬರುವ ಜ್ವರದ ನಿವಾರಕ. ಬೇರಿನಿಂದ ಭಟ್ಟಿ ಇಳಿಸಿದ ಸತ್ವಕ್ಕೆ ವಾತ ನಿರೋಧಕ ಗುಣವಿದೆ. ಜೇನುತುಪ್ಪ ಸೇರಿದರೆ ಸ್ವರ ಭಂಗ ನಿವಾರಿಸುತ್ತದೆ.
ನಾಯಿ ಕಚ್ಚಿದಾಗ ನುಗ್ಗೆ ಎಲೆ, ಅರಿಶಿಣ, ಬೆಳ್ಳುಳ್ಳಿಗಳನ್ನು ಅರೆದು ಹಚ್ಚಿದರೆ ಗುಣವಾಗುತ್ತದೆ. ಹಾವಿನ ವಿಷಕ್ಕೂ ನುಗ್ಗೆಯ ನಾನಾ ಭಾಗಗಳಿಂದ ಚಿಕಿತ್ಸೆ ಮಾಡುತ್ತಾರೆ. ಅದರ ಚಿಗುರೆಲೆಗಳನ್ನು ಅಕ್ಕಿ ತೊಳೆದ ನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯವು ವ್ರಣಗಳನ್ನು ತೊಳೆಯಲು ಉಪಯುಕ್ತ ಕೀಟಾಣುನಾಶಕ.
ನುಗ್ಗೆ ಎಲೆಗಳ ರಸಕ್ಕೆ ನಿಂಬೆರಸ, ಜೇನು, ಎಳನೀರು ಬೆರೆಸಿ ಕುಡಿದರೆ ಆಮಶಂಕೆ, ಭೇದಿ ಶೀಘ್ರ ತಡೆಯಬಹುದು. ಬೂದುಗುಂಬಳದ ರಸದೊಂದಿಗೆ ನುಗ್ಗೆ ಎಲೆಗಳ ರಸ ಬೆರೆಸಿ ಕುಡಿಯುವುದರಿಂದ ಗರ್ಭಿಣಿಯರ ಕಾಲುಗಳಲ್ಲಿ ತುಂಬುವ ನೀರು
ಇಳಿಯುತ್ತದೆ.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ತುಂಬೆ


ತುಂಬೆ 
Latin : LEUCES ASPERA ,Telugu : Tummi (ತುಮ್ಮಿ,Malayaalam Tumba , kamala –Tumbi,Sanskrit -Drona pushpi
Hindi - ಗಮ ಮಧು ಪಟ್ಟಿ
ಇದು ಸಾಮಾನ್ಯ ಔಷಧ ಗಿಡವಾಗಿ ಎಲ್ಲರಿಗೂ ತಿಳಿದಿದೆ .ಇದು ಅನೇಕ ಆಕಸ್ಮಿಕಗಳಲ್ಲಿ ಬಹಳ ಉಪಕಾರಿ . ಇದು ೧-೨ ಅಡಿಎತ್ತರಕ್ಕೆ ಬೆಳೆಯುತ್ತದೆ. ಅಲ್ಲಲ್ಲಿ ಗಂಟುಗಳು ಇರುತ್ತವೆ.ಅಲ್ಲದೆ ಎಲೆಗಳು ೨" ಉದ್ದವಾಗಿರುತ್ತವೆ, ೧/೪ ಇಂಚು ಅಗಲವಿರುತ್ತದೆಇಲಿಗಳ ಕಿವಿಗಳಂತೆ ಇದರ ಹೂವುಗಳು ಕೆಳಗಡೆ ಇರುತ್ತದೆ.ಹೂ ಬಿಳುಪಾಗಿರುತ್ತದೆ , ಒಂದೇ ದಳ ಇರುತ್ತದೆ . .
ಗಿಡದ ಉಪಯೋಗ :
ಇದರ ಎಲೆಗಳನ್ನು ಸಾಮಾನ್ಯವಾಗಿ ಉಪಯೋಗಿಸಲ್ಪಡುತ್ತವೆ .ಇವುಗಲ್ಲನ್ನು ಅನೇಕಸಲ ರೀಚಕವಾಗಿ ಮತ್ತು ಅನೇಕಸಲ ವಾಂತಿ ಮಾಡಿಸಲಿಕ್ಕಾಗಿ ವಿಷಾಹಾರ ಸೇವಿಸಿದಾಗ ಉಪಯೋಗಿಸುತ್ತಾರೆ.ಕಸವನ್ನು ಹೊರಗೆ ಹಾಕುತ್ತದೆ.ಸಾಮಾ ನ್ಯವಾಗಿ ದೇಹದ ತಾಪಮಾನವನ್ನು ಕಾಪಾಡುತ್ತದೆ .ದೃಷ್ಟಿಯನ್ನು ವೃದ್ಧಿಸುತ್ತದೆ. ಹೆಂಗಸರಿಗೆ ಆಗುವ ರಕ್ತ ಸ್ರಾವವನ್ನು ಕಡಿಮೆ ಮಾಡುತ್ತದೆ .
ಎಲೆಗಳು ಎಲ್ಲಾ ವಿಷಕಾರಿ ಸಣ್ಣ ಕ್ರಿಮಿಗಳನ್ನು ನಾಶ ಮಾಡುತ್ತದೆ .
ಹಾವು ಕಚ್ಚಿದಾಗ ಇದರ ಉಪಯೋಗದಿಂದ ಗುಣ ಪಡೆಯಬಹುದು .
ಉಪಯೋಗಿಸುವ ವಿಧಾನ :
ಹಾವು ಕಚ್ಚಿದ ತಕ್ಷಣ ೩/೪ ರಿಂದ 1 OZ .ಇದರ ಎಲೆಗಳ ರಸವನ್ನು ಬಾಯಿ ಮೂಲಕ ಕೊಡಬೇಕು.ತಕ್ಷಣ ೨-೩ ಸಲ ಭೇದಿಯಾಗಿ ಮತ್ತು ವಾಂತಿಯಾಗಿ ಹೊಟ್ಟೆಯೊಳಗಿನ ವಿಷವನ್ನು ಹೊರ ಹಾಕುತ್ತದೆ . ಆಗ ನಿಧಾನವಾಗಿ ದೇಹದ ತಾಪಮಾನ ಮರಳಿ ಮಾಮೂಲು ಸ್ಥಿತಿಗೆ ಬರುತ್ತದೆ .
ಹಾವು ಕಚ್ಚಿದ ೩೦ ತಾಸುಗಳ ವರೆಗೆ ಹಾವು ಕಚ್ಚಿದವರು ಎಚ್ಚರದಿಂದ ಇರಬೇಕು .೨ ದಿವಸ ಹೆಸರು ಬೇಳೆ ಅಣ್ಣ ಮಣ್ಣಿನ ಮಡಿಕೆಯಲ್ಲಿ ಬೇಯಿಸಿದ್ದನ್ನು ಕೊಡಬೇಕು.ಉಪ್ಪು , ಮೆಣಸಿನಕಾಯಿ , ಹುಳಿ,ಮೆಣಸಿನಖಾರ, ಹುಳಿ ಇತಾದಿಗಳನ್ನು ೩ನೆ ದಿನದಿಂದ ತೆಗೆದುಕೊಳ್ಳಬಹುದು .
೧.ಒಂದು ಪಕ್ಷ ರೋಗಿ ಎಚ್ಚರ ತಪ್ಪಿ (ಪ್ರಜ್ಞಾಶೂನ್ಯ ) ಬಿದ್ದರೆ , ಬಾಯಿಯಲ್ಲಿ ಬುರುಗು ಇತ್ಯಾದಿ ಬಂದರೆ ಕೆಲವು ಹನಿ ದ್ರೋಣ ಪುಷ್ಪಿ (ತುಂಬಿ) ಎಲೆಯ ರಸವನ್ನು ಮೂಗಿನ ಹೊಲ್ಲೆಯಲ್ಲಿ ಹಾಕಬೇಕು .ನಂತರ ಸ್ವಲ್ಪ ಸಮಯದಲ್ಲೇ ಪ್ರಜ್ಞೆ ಬರುತ್ತದೆ .ನಂತರ 1oz (ಒಂದು ಔನ್ಸೆ) ರಸವನ್ನು ಬಯೋ ಮೂಲಕ ಕೊಡಿರಿ .ಅದರ ಎಲೆಗಳನ್ನು ಅರೆದು ಹಾವು ಕಚ್ಚಿದ ಜಾಗದಲ್ಲಿ ಹಚ್ಚಿರಿ (ಕಟ್ಟಿರಿ) .
೨.ಇದೆ ತರಹ ಚೇಳು ಕಚ್ಚಿದಾಗ ಅಥವಾ ಇನ್ನಾವುದೇ ಹುಳಗಳು ಕಚ್ಚಿದರೆ ಜೇನು ತುಪ್ಪದ ಜೊತೆ ಬಾಯಿ ಮೂಲಕ ಕೊಡಿರಿ ಮತ್ತು ಎಲೆಗಳನ್ನು ಅರೆದು ಕಚ್ಚಿದ ಜಾಗದಲ್ಲಿ ಹಚ್ಚಿರಿ.ಇದರಿಂದ ಕೂಡಲೇ ಗುಣ ಕಾಣಿಸುತ್ತದೆ .
೩.ಕಾಮಾಲೆ ರೋಗದಲ್ಲಿ (Jaundice) , ಎಚ್ಚರ ತಪ್ಪಿದಾಗ ಬಿಳಿ ಚಿಬ್ಬ್ಬಿನಲ್ಲಿ (White spots) , ತಲೆ ಸುತ್ತಿನಲ್ಲಿ ನೆಗಡಿಯಿಂದ ಮೂಗಿನಿಂದ ನೀರು ಇಳಿಯುತ್ತಿದರೆ , ತುಂಬಿ ರಸ (ಎಲೆಯಿಂದ) ಮೂಗಿಗೆ ಹಾಕಿದರೆ ಗುಣವಾಗುತ್ತದೆ.
೪. ತುಂಬಿ ಎಲೆ ಮತ್ತು ಉತ್ತರಾಣಿ ಎಲೆ (Dacmic extracts) ಎಲೆ ಸೇರಿಸಿ ಚೆನ್ನಾಗಿ ಅರೆದು . ಹಾಲಿನ (ಆಕಳ ಹಾಲಿನ) ಜೊತೆ ಬೆಳಗ್ಗೆ -ಸಾಯಂಕಾಲ ಹೆಣ್ಣು ಮಕ್ಕಳಿಗೆ ಮಾಸಿಕ ತೊಂದರೆ ಗಳಲ್ಲಿ (Irregulalr periods) ಹೆಚ್ಚು ರಕ್ತ ಸ್ರಾವವಗುತ್ತಿದರೆ ಇದರ ಸೇವನೆಯಿಂದ ತುಂಬಾ ಗುಣಕಾರಿಯಾಗುತ್ತದೆ.ಆದರೆ ಹುಳಿ , ಖಾರ ಇತ್ಯಾದಿಗಳನ್ನು ಬಿಡಬೇಕು
ಹೂಗಳ ಉಪಯೋಗ :
ತುಂಬಿ ಹೂಗಳ ರಸ ೪ ಹನಿಗಳು ಉತ್ತರಾಣಿ ಎಲೆಗಳ ರಸ ೨ ಹನಿ ಮತ್ತು ಮೆಣಸು ಪುಡಿ ೨ ಚಿಟಗಿ , ಜೇನು ತುಪ್ಪದ ಜೊತೆಗೆ ಮಕ್ಕಳಿಗೆ ಕೊಟ್ಟರೆ ಹೊಟ್ಟೆಯ ತೊಂದರೆಗಳು ಕಡಿಮೆಯಾಗುತ್ತದೆ .

ಕೃಪೆ : ಸಸ್ಯ ಕಣಜ 


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ತುಳಸಿ


ತುಳಸಿ 
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ನಮ್ಮ ಮನೆಯಂಗಳದಲ್ಲಿ ಬೆಳೆಯುವ ಸಣ್ಣ ಗಿಡಗಳೂ ಸಹ ದೊಡ್ಡ ದೊಡ್ಡ ರೋಗಗಳಿಗೆ ಸಿದ್ಧೌಷಧವಾಗಿರುತ್ತದೆ. ಇದು ಒಂದು ಪವಿತ್ರವಾದ ಮೂಲಿಕೆಯಾಗಿದ್ದು, ಹಲವು ಪೂಜಾ ಕೆಲಸಗಳಲ್ಲಿ ಕೂಡಾ ಇದನ್ನು ಬಳಸುತ್ತಾರೆ. ಇದರಲ್ಲಿ ಅನೇಕ ಜೀವಸತ್ವಗಳು, ಖನಿಜಾಂಶಗಳು ಇದ್ದೂ ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಅಂಶಗಳು ಇದ್ದೂ ದೇಹವನ್ನು ಆರೋಗ್ಯಯುತವಾಗಿ ಕಾಪಾಡಲು ಸಹಾಯಕಾರಿಯಾಗಿದೆ.
* ಮುಖದಲ್ಲಿ ಕಪ್ಪು ಕಲೆಗಳು ಹೆಚ್ಚಿದ್ದರೆ ತುಳಸಿ ಎಲೆಗಳ ರಸಕ್ಕೆ ನಿಂಬೆ ರಸ ಸೇರಿಸಿ ದಿನಕ್ಕೆ 2 ಬಾರಿ ಮೂಖಕ್ಕೆ ಲೇಪಿಸಿದರೆ ಕಲೆಗಳು ಮಾಯವಾಗುತ್ತದೆ
* ತುಳಸಿಯು ಜೀರ್ಣಕಾರಿ ನರಗಳ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ಅಮೈನೋ ಆಮ್ಲಗಳು, ಕೊಲೆಸ್ಟರಾಲ್ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಚಯಾಪಚಯ ಕ್ರಿಯೆಯಲ್ಲಿ ಬಿಡುಗಡೆಯಾಗುವ ಕಿಣ್ವಗಳಿಗೆ ಪೂರೈಸುವ ಮೂಲಕ ಸಹಾಯ ಮಾಡುತ್ತದೆ
* ತುಳಸಿ ಎಲೆಗಳಿಗೆ ನೀರು ಮತ್ತು ಜೇನುತುಪ್ಪವನ್ನು ಸೇರಿಸಿ ಕಷಾಯ ಮಾಡಿ ರಾತ್ರಿ ಮಲಗುವ ಮುನ್ನ ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ ಎಂದು ಹೇಳಲಾಗಿದೆ.

* ತುಳಸಿ ಎಲೆಗಳು ಮುಖದ ಮೇಲಿರುವ ಕಲ್ಮಶಗಳನ್ನು ತೆಗೆದುಹಾಕಲು ನೆರವಾಗುತ್ತವೆ. ತುಳಸಿ ಎಲೆ, ಶ್ರೀಗಂಧದ ಪೇಸ್ಟ್ ಮತ್ತು ರೋಸ್ ವಾಟರ್ ಅನ್ನು ಬೆರಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ತೊಳೆಯುವುದರಿಂದ ಮುಖದ ಮೇಲಾಗುವ ಮೊಡವೆಯನ್ನು ತಡೆಯಬಹುದು.

* ಚರ್ಮದ ತುರಿಕೆ ಹೆಚ್ಚಿದ್ದರೆ ತುಳಸಿ ಎಲೆ ರಸಕ್ಕೆ ನಿಂಬೆ ರಸ ಸೇರಿಸಿ ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ ತುರಿಕೆ ಬೇಗ ಕಡಿಮೆಯಾಗುತ್ತದೆ
* ಹುಳುಕಡ್ಡಿ ಆಗಿದ್ದರೆ ತುಳಸಿ ಎಲೆಯ ರಸಕ್ಕೆ ಉಪ್ಪು ಸೇರಿಸಿ ಪೇಸ್ಟ್ ಮಾಡಿ ಲೇಪಿಸಿದರೆ ಶಮನವಾಗುತ್ತದೆ.
* ತುಳಸಿಯ ಸೇವನೆಯಿಂದ ಥೈರಾಯ್ಡ್ ಗ್ರಂಥಿಗಳು ಈ ಎಲ್ಲಾ ಕಾರ್ಯನಿರ್ವಹಣೆಯನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗುತ್ತದೆ
* ತುಳಸಿ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ಎಲ್ಲಾ ರೀತಿಯ ಜ್ವರ ಶಮನವಾಗುತ್ತದೆ.
* ತುಳಸಿ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಆ ಪುಡಿಯನ್ನು ಸಾಸಿವೆ ಎಣ್ಣೆಯ ಜೊತೆ ಮಿಶ್ರಣ ಮಾಡಿ ರಾತ್ರಿ ಮಲಗುವ ಮುನ್ನ ನೋವಿರುವ ಹಲ್ಲಿಗೆ ಹಚ್ಚಿ ಮಲಗಿದರೆ ಹಲ್ಲು ನೋವು ನಿವಾರಣೆಯಾಗುತ್ತದೆ.
ಹೀಗೆ ಸಕಲ ರೀತಿಯಲ್ಲಿ ಪ್ರಯೋಜನಕಾರಿಯಾಗಿರುವಂತ ತುಳಸಿಯು ಆರೋಗ್ಯದಾಯಕವಾಗಿದ್ದು ಸಾಕಷ್ಟು ಔಷಧಿಯ ಗುಣಗಳನ್ನು ಇದು ಹೊಂದಿದೆ ಇದು ಮನೆಯಲ್ಲಿಯೇ ಸಿಗುವ ಸುಲಭವಾದ ವಸ್ತುವಾಗಿರುವ ಕಾರಣ ಯಾವುದೇ ಅಡ್ಡಪರಿಣಾಮವಿಲ್ಲದೇ ಬಳಕೆ ಮಾಡಬಹುದು ಆದರೂ ಸಹ ವೈದ್ಯರ ಸಲಹೆ ಇದ್ದಲ್ಲಿ ಇನ್ನೂ ಉತ್ತಮ.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಅಮೃತಬಳ್ಳಿ

ಅಮೃತಬಳ್ಳಿ ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶ...